ಬೆಂಗಳೂರು: ಕೊಲೆಯಾದ ರೇಣುಕಸ್ವಾಮಿ ಮೊಬೈಲ್ ಎಸೆದಿದ್ದ ಸುಮನಹಳ್ಳಿ ರಾಜಕಾಲುವೆಯಲ್ಲಿ ಮೊಬೈಲ್ಗಾಗಿ ಪೊಲೀಸರು ಸೋಮವಾರ ತೀವ್ರ ಶೋಧ ನಡೆಸಿದರು.
ಸ್ಥಳಕ್ಕೆ ಹತ್ತಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಕರೆಸಿ ರಾಜಕಾಲುವೆಯಲ್ಲಿ ಹುಡುಕಾಟ ನಡೆಸಲಾಯಿತು. ರಾಜಕಾಲುವೆಗೆ ಇಳಿದು ಕಾರ್ಮಿಕರು ಎರಡು ತಾಸು, 200 ಮೀಟರ್ ಉದ್ದಕ್ಕೂ ಶೋಧಿಸಿದರು. ಆದರೆ, ಮೊಬೈಲ್ ಪತ್ತೆಯಾಗದ ಕಾರಣ ಶೋಧ ಕಾರ್ಯ ಸ್ಥಗಿತ ಮಾಡಲಾಯಿತು.
ಪಟ್ಟಣಗೆರೆಯ ಶೆಡ್ನಲ್ಲಿ ಜೂನ್ 9ರ ರಾತ್ರಿ ರೇಣುಕಸ್ವಾಮಿ ಕೊಲೆ ಮಾಡಿದ ಬಳಿಕ ಆರೋಪಿಗಳು ಮುಂಜಾನೆ ಸುಮಾರು 3.30ಕ್ಕೆ ಸ್ಕಾರ್ಪಿಯೊ ಕಾರಿನಲ್ಲಿ ಮೃತದೇಹವನ್ನು ಹಾಕಿಕೊಂಡು ಸುಮನಹಳ್ಳಿ ಸತ್ವ ಅಪಾರ್ಟ್ಮೆಂಟ್ ಎದುರಿನ ರಾಜಕಾಲುವೆ ಬಳಿ ಎಸೆದು ಪರಾರಿಯಾಗಿದ್ದರು.
ವಿಚಾರಣೆ ವೇಳೆ ಆರೋಪಿಗಳು, ರೇಣುಕಸ್ವಾಮಿಯ ಮೊಬೈಲ್ ರಾಜಕಾಲುವೆಯಲ್ಲಿ ಎಸೆದಿರುವ ಬಗ್ಗೆ ಹೇಳಿದ್ದರು. ಪೊಲೀಸರು ಆರೋಪಿ ಪ್ರದೂಷ್ನನ್ನು ರಾಜಕಾಲುವೆ ಬಳಿ ಕರೆತಂದು ಸ್ಥಳ ಮಹಜರು ನಡೆಸಿದರು. ಬಳಿಕ ಪೌರಕಾರ್ಮಿಕರ ಸಹಾಯ ಪಡೆದು ರಾಜಕಾಲುವೆಯಲ್ಲಿ ಮೊಬೈಲ್ ಪತ್ತೆಗೆ ಹುಡುಕಾಟ ನಡೆಸಿದರು.
‘ರೇಣುಕಾಸ್ವಾಮಿ ಕೊಲೆಯಾಗಿ 10 ದಿನ ಕಳೆದಿದೆ. ಆತನ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ. ರೇಣುಕಸ್ವಾಮಿ ಮೊಬೈಲ್ನಲ್ಲಿ ಪ್ರಮುಖ ಸಾಕ್ಷ್ಯಗಳು ಇರುವ ಸಾಧ್ಯತೆಯಿದೆ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ಧಾರೆ.
ಕಡೆಯದಾಗಿ ರೇಣುಕಸ್ವಾಮಿ ಮೊಬೈಲ್ ಟವರ್ ಲೊಕೇಶನ್ ರಾಜಕಾಲುವೆ ಬಳಿ ಪತ್ತೆಯಾಗಿದೆ.
‘ಪಟ್ಟಣಗೆರೆಯ ಶೆಡ್ಗೆ ರೇಣುಕಸ್ವಾಮಿ ಅವರನ್ನು ಕರೆ ತಂದ ಬಳಿಕ ಪವಿತ್ರಾಗೌಡ ತೋರಿಸಿ ‘ಇವರಿಗೇನಾ ಅಶ್ಲೀಲ ಸಂದೇಶ ಕಳುಹಿಸಿದ್ದು’ ಎಂದು ಆರೋಪಿಗಳು ಬೆದರಿಸಿದ್ದರು. ನಂತರ, ರೇಣುಕಸ್ವಾಮಿ ಮೊಬೈಲ್ ಕಸಿದುಕೊಂಡು ಕ್ಷಮೆ ಕೇಳಿಸಿ ಅದನ್ನು ಚಿತ್ರೀಕರಿಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.
ಚಿತ್ರದುರ್ಗ: ಮಫ್ತಿಯಲ್ಲಿ ಪೊಲೀಸರ ಹುಡುಕಾಟ
ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳ ಮಹಜರು ನಡೆಸಿದ ನಂತರ ಭಾನುವಾರ ರಾತ್ರಿ ಹಾಗೂ ಸೋಮವಾರ ಮಧ್ಯಾಹ್ನದವರೆಗೂ ನಗರದ ವಿವಿಧೆಡೆ ಮಹತ್ವದ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದರು.
ರೇಣುಕಸ್ವಾಮಿ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಸ್ಥಳೀಯ ಆರೋಪಿಗಳ ಮನೆಗೆ ತೆರಳಿ ಭಾನುವಾರ ರಾತ್ರಿಯವರೆಗೂ ತಪಾಸಣೆ ನಡೆಸಿದ್ದರು. ಭಾನುವಾರ ರಾತ್ರಿ ಮಫ್ತಿಯಲ್ಲಿ ರೇಣುಕಸ್ವಾಮಿ ಮನೆಗೆ ತೆರಳಿದ್ದ ಪೊಲೀಸರು ಆತನ ಪತ್ನಿ ಹಾಗೂ ತಂದೆ–ತಾಯಿ ಜೊತೆ ಮಾತನಾಡಿದರು. ರೇಣುಕಸ್ವಾಮಿಯ ಸ್ಕೂಟರ್, ಮೊಬೈಲ್ ಫೋನ್ಗಳ ಬಗ್ಗೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.
‘ಪ್ರಕರಣದ 4ನೇ ಆರೋಪಿ ರಾಘವೇಂದ್ರ ಮನೆಯಲ್ಲಿ ಸಿಕ್ಕಿದ್ದ ರೇಣುಕಸ್ವಾಮಿ ಧರಿಸಿದ್ದ ಚಿನ್ನದ ಸರ, ಉಂಗುರ, ಬೆಳ್ಳಿಯ ಕಡಗ, ಇಷ್ಟಲಿಂಗ ಇರಿಸುವ ಬೆಳ್ಳಿಯ ಕರಡಿಗೆಯನ್ನು ಪಾಲಕರು ಗುರುತಿಸಿದ್ದಾರೆ. ಮೊಬೈಲ್ ಫೋನ್ ರೇಣುಕಸ್ವಾಮಿ ಬಳಿಯೇ ಇತ್ತು ಎಂದು ಪಾಲಕರು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ರೇಣುಕಸ್ವಾಮಿ ಸ್ನೇಹಿತರು, ಸಂಬಂಧಿಕರು ಹಾಗೂ ಅವರು ಕೆಲಸ ಮಾಡುತ್ತಿದ್ದ ಫಾರ್ಮಸಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ರೇಣುಕಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿದ್ದ ರಾಜು ಎಂಬವರನ್ನು ಬಂಧಿಸಿರುವ ಪೊಲೀಸರು, ಅವರಿಗೆ ಮೆಗ್ಗರ್ ಸಾಧನ ನೀಡಿದ್ದ ವ್ಯಕ್ತಿಗೆ ಹುಡುಕಾಟ ನಡೆಸುತ್ತಿದ್ದಾರೆ.
‘ಎರಡು ತಿಂಗಳ ಹಿಂದೆಯೇ ಈ ಸಾಧನವನ್ನು ವ್ಯಕ್ತಿಯೊಬ್ಬರಿಂದ ಖರೀಸಿದ್ದೆ. ಬಂಧಿತ ದೀಪಕ್ ಸಹ ಈ ಸಾಧನವನ್ನು ಶೆಡ್ಗೆ ಆಗಾಗ್ಗೆ ಕೊಂಡೊಯ್ಯುತ್ತಿದ್ದ ಎಂದು ವಿಚಾರಣೆ ವೇಳೆ ರಾಜು ಬಾಯ್ಬಿಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.