ADVERTISEMENT

ಬೆಂಗಳೂರು | ರಸ್ತೆಯಲ್ಲಿ ಕಾರು ಚಾಲಕ, ಬೈಕ್‌ ಸವಾರನ ಬಡಿದಾಟ

​ಪ್ರಜಾವಾಣಿ ವಾರ್ತೆ
Published 22 ಮೇ 2024, 15:37 IST
Last Updated 22 ಮೇ 2024, 15:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ವರ್ತೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಸರ್ಜಾಪುರದ ರಸ್ತೆಯಲ್ಲಿ ಮುಂದಕ್ಕೆ ಸಾಗಲು ಜಾಗ ಬಿಡದ ವಿಚಾರಕ್ಕೆ ಕಾರು ಚಾಲಕ ಹಾಗೂ ಬೈಕ್ ಸವಾರನ ನಡುವೆ ಬಡಿದಾಟ ನಡೆದಿದ್ದು, ದೂರು–ಪ್ರತಿದೂರು ದಾಖಲಾಗಿದೆ.

ಕಾರು ಚಾಲಕ, ಫ್ಲಿಪ್‌ ಕಾರ್ಟ್‌ ಇಂಟರ್‌ನೆಟ್‌ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಅಖಿಲ್‌ ಸಾಬ್‌ ಹಾಗೂ ಬೈಕ್‌ ಸವಾರ, ವಕೀಲ ಜಗದೀಶ್‌ ದೂರು–ಪ್ರತಿದೂರು ನೀಡಿದ್ದಾರೆ.

ಇಬ್ಬರೂ ನೀಡಿದ ದೂರು ಆಧರಿಸಿ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ಕೇರಳದ ಅಖಿಲ್‌ ಸಾಬ್‌ ಅವರು ಕೊಡತಿಯಲ್ಲಿ ನೆಲಸಿದ್ದಾರೆ. ಜಗದೀಶ್‌ ಅವರು ಸರ್ಜಾಪುರದ ನಿವಾಸಿ.

ADVERTISEMENT

‘ಮೇ 17ರಂದು ಬೆಳಿಗ್ಗೆ 10.30ಕ್ಕೆ ಪತ್ನಿ ಹಾಗೂ ಪುತ್ರಿಯ ಜೊತೆಗೆ ಕಾರಿನಲ್ಲಿ ಸರ್ಜಾಪುರ ಮುಖ್ಯರಸ್ತೆಯಲ್ಲಿ ತೆರಳುತ್ತಿದ್ದೆ. ಸರ್ಜಾಪುರ ರಸ್ತೆಯ ಪ್ಯಾಟ್ರಿಕ್‌ ರಸ್ತೆಯ ಬಳಿ ಸ್ಕೂಟರ್‌ನಲ್ಲಿ ಬಂದ ಸವಾರ ಎಡಭಾಗದಿಂದ ಬಂದು ಕಾರು ಹಿಂದಿಕ್ಕಲು ಪ್ರಯತ್ನಿಸಿದರು. ರಸ್ತೆಯಲ್ಲಿ ಜಾಗ ಬಿಡದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಂತರ ಕಾರು ಅಡ್ಡಗಟ್ಟಿ ಕಾರಿನ ಕಿಟಕಿಯನ್ನು ಹೆಲ್ಮೆಟ್‌ನಿಂದ ಒಡೆದು ಹಾಕಿದರು. ಅದರ ಗಾಜು ಬಿದ್ದು ಪುತ್ರಿ ಹಾಗೂ ಪತ್ನಿಗೆ ಗಾಯವಾಗಿದೆ’ ಎಂದು ಅಖಿಲ್ ಸಾಬ್‌ ದೂರು ನೀಡಿದ್ದಾರೆ. ಜಗದೀಶ್‌ ಅವರೂ ‘ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.