ADVERTISEMENT

ರಸ್ತೆ ಬದಿ ಆಟ: ಎರಡು ಗುಂಪುಗಳ ನಡುವೆ ಗಲಾಟೆ, ಎಫ್‌ಐಆರ್‌ ದಾಖಲು

ಮಹಿಳೆ, ಯುವತಿಯ ಕೂದಲು ಹಿಡಿದು ಎಳೆದೊಯ್ದು ಹಲ್ಲೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 16:14 IST
Last Updated 10 ಜೂನ್ 2024, 16:14 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ರಸ್ತೆ ಬದಿಯಲ್ಲಿ ನೆಟ್ ಕಟ್ಟಿಕೊಂಡು ವಾಲಿಬಾಲ್ ಆಡುತ್ತಿದ್ದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ದೂರು– ಪ್ರತಿದೂರು ದಾಖಲಾಗಿದೆ. ಗಲಾಟೆಯಲ್ಲಿ ಕಿಡಿಗೇಡಿಗಳು ಮಹಿಳೆ ಮೇಲೆ ಹಲ್ಲೆ ನಡೆಸಿದ್ದು, ಆಕೆ ಗಾಯಗೊಂಡಿದ್ದಾರೆ.

ತಲಘಟ್ಟಪುರ ಆವಲಹಳ್ಳಿಯಲ್ಲಿ ಭಾನುವಾರ ಸಂಜೆ ಗಲಾಟೆ ನಡೆದಿದ್ದು, ನೇತ್ರಾವತಿ ಎಂಬವರು ಯೋಗೇಶ್ ಮತ್ತು ಭಾಸ್ಕರ್ ವಿರುದ್ಧ ದೂರು ನೀಡಿದ್ದಾರೆ. ಭಾಸ್ಕರ್ ಅವರು ನೇತ್ರಾವತಿ ಮತ್ತು ಆಕೆಯ ಪುತ್ರ ಸಂಜಯ್ ವಿರುದ್ಧ ಪ್ರತಿದೂರು ನೀಡಿದ್ದಾರೆ. ಎರಡು ಪ್ರತ್ಯೇಕ ಎಫ್‌ಐಆರ್‌ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೂರುದಾರರಾದ ನೇತ್ರಾವತಿ ಪುತ್ರ ಸಂಜಯ್ ಮತ್ತು ಪುತ್ರಿ ಸೇರಿ ಕೆಲವು ಸ್ಥಳೀಯರು ಭಾನುವಾರ ಸಂಜೆ ರಸ್ತೆ ಬದಿ ನೆಟ್ ಕಟ್ಟಕೊಂಡು ವಾಲಿಬಾಲ್ ಆಡುತ್ತಿದ್ದರು. ಇದರಿಂದ ಸ್ಥಳೀಯರ ಓಡಾಟಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ, ಸ್ಥಳೀಯರಾದ ಬಾಲಾಜಿ, ಯೋಗಿ ಹಾಗೂ ಭಾಸ್ಕರ್ ಅದನ್ನು ಪ್ರಶ್ನಿಸಿದ್ದರು. ಅಷ್ಟರಲ್ಲಿ ಸಂಜಯ್ ಅವರ ತಾಯಿ ಸ್ಥಳಕ್ಕೆ ಬಂದರು. ಆಗ ಪರಸ್ಪರ ವಾಗ್ವಾದ ನಡೆಯಿತು. ಗಲಾಟೆ ವಿಕೋಪಕ್ಕೆ ತಿರುಗಿ ಎರಡೂ ಗುಂಪುಗಳಲ್ಲಿ ಇದ್ದವರು ಹೊಡೆದಾಡಿಕೊಂಡಿದ್ದಾರೆ. ಗಲಾಟೆ ವೇಳೆ ಕೆಲವರು ನೇತ್ರಾವತಿ ಮತ್ತು ಆಕೆಯ ಪುತ್ರಿಯ ತಲೆ ಕೂದಲು ಹಿಡಿದು ರಸ್ತೆಯಲ್ಲಿ ಎಳೆದಾಡಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ನೇತ್ರಾವತಿ ಮತ್ತು ಆಕೆಯ ಪುತ್ರ ಸಂಜಯ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿ ಭಾಸ್ಕರ್ ಪ್ರತಿದೂರು ದಾಖಲಿಸಿದ್ಧಾರೆ. ಹೀಗಾಗಿ ಎರಡೂ ಗುಂಪುಗಳ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.