ಯಲಹಂಕ: ತಂತ್ರಜ್ಞಾನ ಸಾಧನವೇ ಹೊರತು ಶಿಕ್ಷಕರಂತೆ ಮಾರ್ಗದರ್ಶನ ಮಾಡಲು ಸಾಧ್ಯವಿಲ್ಲ, ಸಮಾಜದಲ್ಲಿ ಶಿಕ್ಷಕರ ಪಾತ್ರ ಅನನ್ಯವಾದುದು ಎಂದು ಆಂಧ್ರಪ್ರದೇಶ ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಅಭಿಪ್ರಾಯಪಟ್ಟರು.
ಗೋವಿಂದಪುರದಲ್ಲಿರುವ ವಿದ್ಯಾಶಿಲ್ಪ್ ಅಕಾಡೆಮಿಯಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಪಿ.ದಯಾನಂದ ಪೈ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಬಿಲ್ ಗೇಟ್ಸ್ ಸೇರಿ ಮಹಾನ್ ದಿಗ್ಗಜರೆಲ್ಲರೂ ತಂತ್ರಜ್ಞಾನಕ್ಕಿಂತ ಶಿಕ್ಷಕರ ಪಾತ್ರದ ಬಗ್ಗೆಯೇ ಹೆಚ್ಚು ಒತ್ತು ನೀಡಿದ್ದು, ಜಗತ್ತಿನಲ್ಲಿ ಶಿಕ್ಷಕರಿಗಿಂತ ಪರ್ಯಾಯ ಮತ್ತೊಂದಿಲ್ಲ ಎಂದು ಪ್ರತಿಪಾದಿಸಿದ್ದಾರೆ‘ ಎಂದರು.
ಗ್ರಾಮೀಣಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಮಕ್ಕಳ ಶಿಕ್ಷಣದ ಗುಣಮಟ್ಟ ಮತ್ತು ಆರೋಗ್ಯ ಸುಧಾರಣೆಗಾಗಿ ದಯಾನಂದ ಪೈ ಅವರು, ತಮ್ಮದೇ ಆದ ರೀತಿಯಲ್ಲಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಮಕ್ಕಳ ಸೃಜನಶೀಲತೆ ಮತ್ತು ಸಾಂಸ್ಕೃತಿಕ ಪ್ರತಿಭೆ ಹೊರತರಲು ಈ ಸಭಾಂಗಣವು ಸೂಕ್ತ ವೇದಿಕೆಯಾಗಿ ಮಾರ್ಪಾಡಾಗಲಿ ಎಂದು ಅವರು ಆಶಿಸಿದರು.
ವಿದ್ಯಾಶಿಲ್ಪ್ ಶಿಕ್ಷಣ ಸಮೂಹದ ವ್ಯವಸ್ಥಾಪಕ ಟ್ರಸ್ಟಿ ಡಾ.ಪಿ.ದಯಾನಂದ ಪೈ ಮಾತನಾಡಿ, ಇಷ್ಟೊಂದು ಬೆಳವಣಿಗೆಗೆ ದಕ್ಷಿಣ ಕನ್ನಡದ ಮಣ್ಣಿನ ಗುಣವೇ ಕಾರಣ; ಸಮಾಜದಿಂದ ಪಡೆದುದನ್ನು ಕಿಂಚಿತ್ತಾದರೂ ಸಮಾಜದ ಒಳಿತಿಗಾಗಿ ಮರಳಿ ನೀಡುವುದರಲ್ಲಿ ಅತ್ಯಂತ ತೃಪ್ತಿ ಸಿಗುತ್ತದೆ ಎಂದು ತಿಳಿಸಿದರು.
ವಿದ್ಯಾಶಿಲ್ಪ್ ಶಿಕ್ಷಣ ಸಮೂಹದ ಟ್ರಸ್ಟಿ ಡಾ.ಕಿರಣ್ ಪೈ, ಶಾಲೆಯ ಮುಖ್ಯಸ್ಥರಾದ ಕಲೈಸೆಲ್ಪಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.