ಬೆಂಗಳೂರು: ದೇವರ ಜೀವನಹಳ್ಳಿ (ಡಿ.ಜೆ. ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ಸಯ್ಯದ್ ಸುಹೇಲ್ ಅಲಿಯಾಸ್ ಪಪ್ಪಾಯಿಯನ್ನು (18) ದುಷ್ಕರ್ಮಿಗಳು ಕೊಲೆ ಮಾಡಿ, ಪರಾರಿಯಾಗಿದ್ದಾರೆ.
‘ಅಪರಾಧ ಹಿನ್ನೆಲೆಯುಳ್ಳ ಸುಹೇಲ್, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಹೆಸರು ರೌಡಿಪಟ್ಟಿಯಲ್ಲಿತ್ತು. ಜನ್ಮದಿನವಾಗಿದ್ದ ಗುರುವಾರವೇ (ಸೆ. 28) ಈತನ ಕೊಲೆಯಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸ್ಥಳೀಯ ನಿವಾಸಿ ಸುಹೇಲ್, ಗುರುವಾರ ರಾತ್ರಿ ತನ್ನ ಮನೆಯಲ್ಲಿದ್ದ. ಇದೇ ವೇಳೆ ಮನೆಗೆ ಬಂದಿದ್ದ ಆರೋಪಿಗಳು, ಮಾತನಾಡಬೇಕೆಂದು ಹೇಳಿ ಸುಹೇಲ್ನಲ್ಲಿ ಕರೆದೊಯ್ದಿದ್ದರು. ಮನೆ ಸಮೀಪದ ಸ್ಥಳವೊಂದಕ್ಕೆ ಕರೆದೊಯ್ದಿದ್ದ ಆರೋಪಿಗಳು, ಜಗಳ ತೆಗೆದು ಸುಹೇಲ್ಗೆ ಚಾಕುವಿನಿಂದ 20 ಬಾರಿ ಇರಿದಿದ್ದರು.’
‘ತೀವ್ರ ಗಾಯಗೊಂಡಿದ್ದ ಸುಹೇಲ್ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಹಳೇ ವೈಷಮ್ಯದಿಂದಾಗಿ ಪರಿಚಯಸ್ಥರೇ ಕೃತ್ಯ ಎಸಗಿರುವ ಮಾಹಿತಿ ಇದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.