ಬೆಂಗಳೂರು: ವಿ.ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ನಿಲುಗಡೆ ಮಾಡಲಾಗಿದ್ದ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ ನಗರದ ನಿವಾಸಿ ಅಭಿಷೇಕ್(27) ಬಂಧಿತ ಆರೋಪಿ. ಚಾಮರಾಜನಗರ ಜಿಲ್ಲೆ ಹನೂರು ಪಟ್ಟಣದ ಆರ್.ಎಸ್.ದೊಡ್ಡಿಯ ಅಭಿಷೇಕ್, ಜೆ.ಪಿ. ನಗರದಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದ ಎಂದು ಪೊಲೀಸರು ಹೇಳಿದರು.
‘ಬಂಧಿತ ಆರೋಪಿಯಿಂದ ₹18 ಲಕ್ಷ ಮೌಲ್ಯದ ಒಂದು ಟೆಂಪೊ ಟ್ರಾವೆಲ್ಲರ್, ಮೂರು ಆಟೊಗಳು ಹಾಗೂ ಐದು ಬೈಕ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿಯ ವಿರುದ್ಧ ಜಯನಗರ, ವಿಜಯನಗರ, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ವಾಹನ ಕಳ್ಳತನವನ್ನೇ ಆರೋಪಿ ವೃತ್ತಿಯಾಗಿಸಿಕೊಂಡಿದ್ದ’ ಎಂದರು.
‘ಜೂನ್ 17ರಂದು ಸಜ್ಜನರಾವ್ ವೃತ್ತದ ಬಳಿಯ ಸತ್ಯನಾರಾಯಣಸ್ವಾಮಿ ದೇಗುಲದ ಬಳಿ ವ್ಯಕ್ತಿಯೊಬ್ಬರು ಟೆಂಪೊ ಟ್ರಾವೆಲ್ಲರ್ ನಿಲುಗಡೆ ಮಾಡಿ ಮನೆಗೆ ತೆರಳಿದ್ದರು. ಮರು ದಿನ ಬಂದು ನೋಡಿದಾಗ ವಾಹನ ಸ್ಥಳದಲ್ಲಿ ಇರಲಿಲ್ಲ. ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಸಜ್ಜನರಾವ್ ವೃತ್ತದ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಯನ್ನು ಬಂಧಿಸಲಾಗಿದೆ’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.