ಬೆಂಗಳೂರು: ‘ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರು ಶನಿವಾರ ಮನೆಯಲ್ಲಿ ಮತ ಚಲಾಯಿಸಿದ ಸಂದರ್ಭದಲ್ಲಿ ಗೋಪ್ಯತೆ ಉಲ್ಲಂಘನೆಯಾಗಿಲ್ಲ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಹಿರಿಯ ನಾಗರಿಕರೊಬ್ಬರು ಮನೆಯಲ್ಲಿ ಮತ ಚಲಾಯಿಸುವಾಗ ಬಿಜೆಪಿ ಕಾರ್ಯಕರ್ತರೊಬ್ಬರು ಹಾಜರಿದ್ದರು ಎಂದು ಆರೋಪಿಸಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರ ಚುನಾವಣಾ ಏಜೆಂಟ್ ದೂರು ನೀಡಿದ್ದರು.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿರುವ ಮೀನಾ, ‘ದೂರಿನ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಸೂಚಿಸಲಾಗಿತ್ತು. ಮತದಾನದ ಸಮಯದ ವಿಡಿಯೊ, ಫೋಟೊಗಳನ್ನು ಪರಿಶೀಲಿಸಲಾಗಿದೆ. ಮತದಾನದಲ್ಲಿ ಗೋಪ್ಯತೆ ಉಲ್ಲಂಘಿಸಿಲ್ಲ ಮತ್ತು ಪ್ರಭಾವ ಬೀರುವ ಚಟುವಟಿಕೆಯೂ ನಡೆದಿಲ್ಲ ಎಂಬುದು ಖಚಿತವಾಗಿದೆ’ ಎಂದಿದ್ದಾರೆ.
ಒಂದು ಮನೆಯಲ್ಲಿ ಮತದಾನ ಪೂರೈಸಿ ಮತ್ತೊಂದು ಮನೆಗೆ ಹೋಗುವಾಗ ಮತಗಟ್ಟೆ ಅಧಿಕಾರಿಯ ಗುರುತಿನ ಚೀಟಿ ಕಳೆದುಹೋಗಿತ್ತು. ಉಳಿದ ಮತಗಟ್ಟೆ ಸಿಬ್ಬಂದಿ ಗುರುತಿನ ಚೀಟಿ ಧರಿಸಿಕೊಂಡು ಕರ್ತವ್ಯ ನಿರ್ವಹಿಸಿದ್ದರು. ತಕ್ಷಣ ಮತಗಟ್ಟೆ ಅಧಿಕಾರಿಗೆ ಮತ್ತೊಂದು ಗುರುತಿನ ಚೀಟಿ ವಿತರಿಸಲಾಗಿದೆ. ಶನಿವಾರ ಮನೆ ಮತದಾನದಲ್ಲಿ ಯಾವುದೇ ಲೋಪವೂ ಆಗಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.