ADVERTISEMENT

ಭಾಷಣದ ಸರಕಾದ ಸಾಮಾಜಿಕ ನ್ಯಾಯ: ಬಸವರಾಜ ಬೊಮ್ಮಾಯಿ

ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಕಾರ್ಯಕ್ರಮ l ಸಿ.ಎಂ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಮೇ 2022, 19:31 IST
Last Updated 1 ಮೇ 2022, 19:31 IST
ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು. ನಿರಂಜನಾನಂದ ಪುರಿ ಸ್ವಾಮೀಜಿ, ಸಚಿವರಾದ ಮುನಿರತ್ನ, ಬೈರತಿ ಬಸವರಾಜು ಮತ್ತಿತರರು ಇದ್ದಾರೆ
ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು. ನಿರಂಜನಾನಂದ ಪುರಿ ಸ್ವಾಮೀಜಿ, ಸಚಿವರಾದ ಮುನಿರತ್ನ, ಬೈರತಿ ಬಸವರಾಜು ಮತ್ತಿತರರು ಇದ್ದಾರೆ   

ಕೆಂಗೇರಿ: ‘ಸಾಮಾಜಿಕ ನ್ಯಾಯ ಭಾಷಣದ ಸರಕಾಗಿ ಹೋಗಿದೆ. ಮೂಲಭೂತವಾಗಿ ದೊರಕಬೇಕಾದ ಸವಲತ್ತುಗಳನ್ನು ಒದಗಿಸಿದರೆ ಆಯಾ ಸಮಾಜಗಳೇ ಸಾಮಾಜಿಕ ನ್ಯಾಯ ಪಡೆದುಕೊಳ್ಳುವ ಶಕ್ತಿ ಪಡೆಯಲಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ವತಿಯಿಂದ ಕೆಂಗೇರಿ ಬಳಿಯ ರಾಮಾನುಜ ಮಠದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಸ್ತೆಗಳು, ಕಟ್ಟಡಗಳನ್ನು ನಿರ್ಮಾಣ ಮಾಡುವುದಷ್ಟೇ ಸರ್ಕಾರದ ಕೆಲಸವಲ್ಲ. ಯಾವುದೇ ಕುಟುಂಬ ಹಸಿವಿನಿಂದ ನರಳದಂತೆ ಹಾಗೂ ಸ್ವಾಭಿಮಾನದಿಂದ ಬದುಕುಕಟ್ಟಿ ಕೊಳ್ಳುವ ವಾತಾವರಣವನ್ನು ಸೃಷ್ಟಿಸಬೇಕು. ಅದೇ ಸುಭಿಕ್ಷ ಸರ್ಕಾರದ ಲಕ್ಷಣ ಎಂದರು.

ADVERTISEMENT

ಕೆಲ ಮಂದಿ ಸಾಮರ್ಥ್ಯದ ಬಗ್ಗೆ ಪದೇ ಪದೇ ಮಾತನಾಡುತ್ತಾರೆ. ಜನರು ತಕ್ಕ ಉತ್ತರ ನೀಡಿದ ಬಳಿಕವೂ ಅವರು ನಾವೇ ಸಮರ್ಥರು ಎಂಬ ಭ್ರಮೆಯಲ್ಲಿದ್ದಾರೆ. ಸೂರಿಲ್ಲವರಿಗೆ ಸೂರು, ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡುವುದೇ ಸಾಮರ್ಥ್ಯ. ಭಾಷಣಗಳಿಂದ ಜನರ ಉದ್ಧಾರ ಆಗದು. ದೀನ ದಲಿತರ ಬದುಕು ಹಸನುಗೊಳಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ನುಡಿದಂತೆ ನಡೆದು ಜನರ ಆಶೀರ್ವಾದ ಬೇಡುತ್ತೇನೆ’ ಎಂದರು.

ಒಕ್ಕೂಟದ ಅಧ್ಯಕ್ಷ ಹಾಗೂ ಕಾಗಿನೆಲೆ ಗುರುಪೀಠಾಧ್ಯಕ್ಷ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರು, ‘ಎಲ್ಲ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ಒಕ್ಕೂಟ ಸ್ಥಾಪನೆಯಾಗಿದೆ. ಇದರಲ್ಲಿರುವ ಎಲ್ಲ 40 ಮಠಗಳಿಗೆ ಸೇರಿ ₹119
ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಹಣದಲ್ಲಿ ಶೈಕ್ಷಣಿಕ, ದಾಸೋಹದಂಥ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಈಶ್ವರಾನಂದ ಪುರಿ ಸ್ವಾಮೀಜಿ, ಸೋಮೇಶ್ವರ ಸ್ವಾಮೀಜಿ, ಹಾಗೂ ಸತ್ಯಕ್ಕ ತಾಯಿ ಸೇರಿ 7 ಮಹಿಳಾ ಮಠಾಧೀಶರು, ಸಚಿವರಾದ ಮುನಿರತ್ನ, ಬೈರತಿ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.