ADVERTISEMENT

ಡೆಂಗಿ: ಬಿಎಂಟಿಸಿ ನಿಲ್ದಾಣ, ಘಟಕಗಳಲ್ಲಿ ದ್ರಾವಣ ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 15:55 IST
Last Updated 8 ಜುಲೈ 2024, 15:55 IST
ಟೈರ್‌ಗಳಲ್ಲಿ ನಿಂತಿದ್ದ ನೀರನ್ನು ಬಿಎಂಟಿಸಿ ಸಿಬ್ಬಂದಿ ಚೆಲ್ಲಿದರು
ಟೈರ್‌ಗಳಲ್ಲಿ ನಿಂತಿದ್ದ ನೀರನ್ನು ಬಿಎಂಟಿಸಿ ಸಿಬ್ಬಂದಿ ಚೆಲ್ಲಿದರು   

ಬೆಂಗಳೂರು: ಡೆಂಗಿ ನಿಯಂತ್ರಣಕ್ಕಾಗಿ ಬಿಎಂಟಿಸಿ ಘಟಕಗಳು, ಬಸ್‌ನಿಲ್ದಾಣಗಳಲ್ಲಿ ಸೋಮವಾರ ಸ್ವಚ್ಛತಾಕಾರ್ಯ ಹಾಗೂ ದ್ರಾವಣ ಸಿಂಪಡಣೆ ನಡೆಯಿತು.

ಡೆಂಗಿ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಬಿಎಂಟಿಸಿಯ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ಘಟಕ ವ್ಯವಸ್ಥಾಪಕರಿಗೆ, ನಿಲ್ದಾಣಾಧಿಕಾರಿಗಳಿಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್. ಆರ್. ಸೂಚನೆ ನೀಡಿದ್ದರು. 

ಅದರಂತೆ 49 ಘಟಕಗಳು, 10 ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರ (ಟಿಟಿಎಂಸಿ), ಪ್ರಮುಖ ಬಸ್‌ ನಿಲ್ದಾಣಗಳಾಗಿರುವ ಮೆಜೆಸ್ಟಿಕ್‌ ಕೆಂಪೇಗೌಡ ಬಸ್‌ ನಿಲ್ದಾಣ, ಕೆ.ಆರ್‌. ಮಾರುಕಟ್ಟೆ ಮತ್ತು ಶಿವಾಜಿನಗರ ಬಸ್‌ ನಿಲ್ದಾಣಗಳು ಹಾಗೂ ನಾಲ್ಕು ಕಾರ್ಯಾಗಾರಗಳಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ ಲಾರ್ವಾ ನಿಯಂತ್ರಣ ದ್ರಾವಣ ಸಿಂಪಡಿಸಲಾಯಿತು.

ADVERTISEMENT

ಘಟಕಗಳಲ್ಲಿ ಬಳಸಿದ ಟೈರುಗಳಲ್ಲಿ ನೀರು ಶೇಖರಿಸದಂತೆ ಎಚ್ಚರಿಕೆ ವಹಿಸಲಾಯಿತು. ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರೆಲ್‌ಗಳಿಗೆ ಸರಿಯಾದ ಮುಚ್ಚಳ ಅಳವಡಿಸಲಾಯಿತು. ಘಟಕಗಳಲ್ಲಿ ಶೇಖರಣೆಯಾಗುವ ಘನ ತ್ಯಾಜಗಳಲ್ಲಿ ನೀರು ನಿಲ್ಲದಂತೆ ಮಾಡಿದ್ದಲ್ಲದೇ, ಕಸ ವಿಲೇವಾರಿಗೆ ಕ್ರಮ ವಹಿಸಲಾಯಿತು. ಹೂದಾನಿಗಳಲ್ಲಿ ನೀರು ಶೇಖರವಾಗದಂತೆ ಎಚ್ಚರಿಕೆ, ಕಟ್ಟಡಗಳ ಮೆಟ್ಟಿಲು ಮತ್ತು ಚಾವಣಿಯ ಮೇಲೆ ನೀರು ನಿಲ್ಲದಂತೆ ಮಾಡಲಾಯಿತು ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.