ಬೆಂಗಳೂರು: ರಾಜ್ಯ ಅಗ್ನಿಶಾಮಕ ಇಲಾಖೆಯ ಡಿಜಿಪಿ ಕಮಲ್ ಪಂತ್ ಅವರು ಜೂನ್ 30ರಂದು (ಭಾನುವಾರ) ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 34 ವರ್ಷ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. 2022ರಿಂದ ಅಗ್ನಿಶಾಮಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
ಉತ್ತರಾಖಂಡ ರಾಜ್ಯದ ಕಮಲ್ ಪಂತ್ ಅವರು, 1990 ಬ್ಯಾಚ್ನ ಐಪಿಎಸ್ ಅಧಿಕಾರಿ. ಕರ್ನಾಟಕ ಕೇಡರ್ ಅಧಿಕಾರಿಯಾಗಿ ನೇಮಕಗೊಂಡಿದ್ದ ಅವರು 1994ರಲ್ಲಿ ಶಿವಮೊಗ್ಗದ ಭದ್ರಾವತಿಯಲ್ಲಿ ಎಎಸ್ಪಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಎಸ್ಪಿ, ಡಿಐಜಿ, ಐಜಿಪಿಯಾಗಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಸಿಬಿಐ, ರಾಜ್ಯ ಪೊಲೀಸ್ ಇಲಾಖೆ ಎಡಿಜಿಪಿ ಹಾಗೂ ಕರ್ನಾಟಕದ ಲೋಕಾಯುಕ್ತದಲ್ಲೂ ಕೆಲಸ ಮಾಡಿದ್ದರು.
ಮಾಜಿ ಲೋಕಾಯುಕ್ತ ಭಾಸ್ಕರ್ ರಾವ್ ಹಾಗೂ ಅವರ ಪುತ್ರನ ಮೇಲೆ ಲಂಚ ಪ್ರಕರಣ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿದ್ದ ಎಸ್ಐಟಿ ತಂಡದ ಮುಖ್ಯಸ್ಥರಾಗಿ ಕಮಲ್ ಪಂತ್ ಕೆಲಸ ಮಾಡಿದ್ದರು.
ಛಾಪಾ ಕಾಗದ ಹಗರಣದಲ್ಲಿ ಅಬ್ದುಲ್ ಕರೀಂ ಲಾಲ್ ತೆಲಗಿಗೆ ಶಿಕ್ಷೆ ಆಗುವಂತೆ ಪ್ರಕರಣದ ತನಿಖೆ ನಡೆಸಿದ್ದರು. 2020-22ರ ವರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಕೆಲಸ ಮಾಡಿದ್ದರು. ನಿರ್ಭಯಾ ಯೋಜನೆಯ ಅಡಿ ಸೇಫ್ ಸಿಟಿ ನಗರ ಯೋಜನೆಗೆ ಬುನಾದಿ ಹಾಕಿದ್ದರು. ರಾಷ್ಟ್ರಪತಿ ಹೆಸರಿನ ಜೀವಮಾನ ಪೊಲೀಸ್ ಪದಕ ಸೇರಿ ಹಲವು ಗೌರವಕ್ಕೆ ಕಮಲ್ ಪಂತ್ ಭಾಜನರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿನ ಕೋರಮಂಗಲದ ಕೆಎಸ್ಆರ್ಪಿ ಪರೇಡ್ ಮೈದಾನದಲ್ಲಿ ಶನಿವಾರ ಬೆಳಿಗ್ಗೆ 8ಕ್ಕೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.