ಬೆಂಗಳೂರು: ‘ಕಾವೇರಿ ಅಂತರರಾಜ್ಯ ನದಿ ನೀರಿನ ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಐತಿಹಾಸಿಕ ಅನ್ಯಾಯವಾಗಿದೆ. ನ್ಯಾಯ ಪಡೆಯಲು ನಡೆಸುವ ಹೋರಾಟದ ಭಾರವನ್ನು ರಾಜಕಾರಣಿಗಳ ಮೇಲಷ್ಟೆ ಹೊರಿಸಲಾಗದು’ ಎಂದು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದರು.
ಗಾಂಧಿಭವನದಲ್ಲಿ ಭಾನುವಾರ ನಡೆದ ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್ ಅವರ ‘ಕಾವೇರಿ ವಿವಾದ– ಒಂದು ಐತಿಹಾಸಿಕ ಹಿನ್ನೋಟ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಸಾಹಿತಿಗಳು ಸೇರಿದಂತೆ ರಾಜ್ಯದಲ್ಲಿರುವ ಅನೇಕ ಪ್ರಭಾವಿ ಅತಿಗಣ್ಯ ವ್ಯಕ್ತಿಗಳು ಗಟ್ಟಿ ಧ್ವನಿಯಲ್ಲಿ ರಾಜ್ಯದ ಪರ ಮಾತನಾಡಿದ್ದರೆ ನ್ಯಾಯ ದೊರಕುತ್ತಿತ್ತು’ ಎಂದರು.
ಈಗ ಇಂತಹ ವಿಚಾರಗಳಲ್ಲಿ ರಾಜ್ಯದ ಪರ ಮಾತನಾಡಬೇಕಾದ ರಾಜಕೀಯ ನಾಯಕತ್ವ ದುರ್ಬಲವಾಗಿದೆ. ಮತದಾರರೂ ದುರ್ಬಲ ಆಗಿರುವುದು ಇದಕ್ಕೆ ಕಾರಣ. ಐತಿಹಾಸಿಕ ಅನ್ಯಾಯದ ಹಳೆಯ ಗಾಯವನ್ನೇ ನೆಕ್ಕಿಕೊಳ್ಳುತ್ತಾ ಕೂರುವ ಕಾಲವೂ ಇದಲ್ಲ. ಇರುವ ನೀರಿನ ಸದ್ಬಳಕೆಯ ಜತೆಗೆ, ಮೇಕೆದಾಟು ಜಲಾಶಯ ನಿರ್ಮಾಣದಂತಹ ಶಾಶ್ವತ ಪರಿಹಾರ ಕ್ರಮಗಳಿಗಾಗಿ ಜನರು ಒಕ್ಕೊರಲಿನ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.
ಕಾವೇರಿ ಜಲ ವಿವಾದದಲ್ಲಿ ನ್ಯಾಯಮಂಡಳಿಯಿಂದ ಕರ್ನಾಟಕಕ್ಕೆ ಸತತವಾಗಿ ಅನ್ಯಾಯವಾಯಿತು. ಆದರೆ, ಸುಪ್ರೀಂ ಕೋರ್ಟ್ನಲ್ಲಿ ಒಂದಷ್ಟು ನ್ಯಾಯ ಸಿಕ್ಕಿದೆ. ಇದಕ್ಕೆ ಕಾರಣ ಫಾಲಿ ಎಸ್. ನರಿಮನ್ ಅವರಂತಹ ವಕೀಲರ ಪ್ರಯತ್ನ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.