ADVERTISEMENT

ದಾಬಸ್ ಪೇಟೆ: ಸರ್ಕಾರಿ ಶಾಲಾ ಮಕ್ಕಳಿಗೆ 'ವನ ದರ್ಶನ'

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 14:33 IST
Last Updated 16 ಸೆಪ್ಟೆಂಬರ್ 2024, 14:33 IST
ಉದ್ಯಾನದಲ್ಲಿರುವ ಪ್ರಕೃತಿ ಶಿಬಿರದಲ್ಲಿ ಮಕ್ಕಳಿಗೆ ಮಾಹಿತಿ ನೀಡುತ್ತಿರುವ ಸಂಪನ್ಮೂಲ ವ್ಯಕ್ತಿಗಳು.  
ಉದ್ಯಾನದಲ್ಲಿರುವ ಪ್ರಕೃತಿ ಶಿಬಿರದಲ್ಲಿ ಮಕ್ಕಳಿಗೆ ಮಾಹಿತಿ ನೀಡುತ್ತಿರುವ ಸಂಪನ್ಮೂಲ ವ್ಯಕ್ತಿಗಳು.     

ದಾಬಸ್ ಪೇಟೆ: ನೆಲಮಂಗಲದ ಉಪ ವಲಯ ಅರಣ್ಯ ವಿಭಾಗದಿಂದ 'ಚಿಣ್ಣರ ವನದರ್ಶನ' ಕಾರ್ಯಕ್ರಮದಡಿ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ, ಅವ್ವೇರಹಳ್ಳಿ ಹಾಗೂ ಬರಗೇನಹಳ್ಳಿ ಸರ್ಕಾರಿ ಶಾಲೆಗಳ 100 ಮಕ್ಕಳನ್ನು ಬನ್ನೇರುಘಟ್ಟ ಪ್ರಕೃತಿ ಶಿಬಿರಕ್ಕೆ ಕರೆದೊಯ್ದು, ವನ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ‌ ಕುರಿತು ಅರಿವು ಮೂಡಿಸಲಾಯಿತು.

ಸೆಪ್ಟೆಂಬರ್ 11ರಿಂದ 14ರವರೆಗೆ ನಡೆದ ಪ್ರವಾಸ ಕಾರ್ಯಕ್ರಮದಲ್ಲಿ, ಮೊದಲ ಹಂತದಲ್ಲಿ ಹೊನ್ನೇನಹಳ್ಳಿ ಶಾಲೆಯ 50 ಮಕ್ಕಳು, ಎರಡನೇ ಹಂತದಲ್ಲಿ ಅವ್ವೇರಹಳ್ಳಿ ಮತ್ತು ಬರಗೇನಹಳ್ಳಿ ಶಾಲೆಗಳ 50 ಮಕ್ಕಳನ್ನು ಕರೆದುಕೊಂಡು ಹೋಗಲಾಗಿತ್ತು. 4 ರಿಂದ 7ನೇ ತರಗತಿ ಮಕ್ಕಳನ್ನು ಈ ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಮಕ್ಕಳು ಪ್ರಕೃತಿ ಶಿಬಿರಕ್ಕೆ ಹೋಗುವ ಮಾರ್ಗದಲ್ಲಿ ವಲಯ ಅರಣ್ಯಾಧಿಕಾರಿ ಕಚೇರಿ ಹಾಗೂ ನರ್ಸರಿಗೆ ಭೇಟಿ ನೀಡಿ, ಅಲ್ಲಿನ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು. ಪ್ರಾಣಿ ಸಂಗ್ರಹಾಲಯ, ಚಿಟ್ಟೆ ಪಾರ್ಕ್‌, ಕ್ಯಾಂಪ್ ವೀಕ್ಷಣೆ ಜೊತೆಗೆ ಸಫಾರಿ, ಕಿರು ಚಾರಣದ ಮೂಲಕ ಅರಣ್ಯ, ಪಕ್ಷಿ, ಪ್ರಾಣಿಗಳ ಬಗ್ಗೆ ಮಾಹಿತಿ ನೀಡಲಾಯಿತು.

ADVERTISEMENT

ಪ್ರಕೃತಿ ಸಂಬಂಧಿತ ಆಟಗಳಲ್ಲಿ ಪಾಲ್ಗೊಂಡ ಮಕ್ಕಳಿಗೆ, ರಸಪ್ರಶ್ನೆ, ಅಭಿನಯ ಮತ್ತು ನಾಟಕಗಳ ಮೂಲಕವೂ ಅರಣ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಯಿತು.

‘ಸಂಪನ್ಮೂಲ ವ್ಯಕ್ತಿ ಯಶವಂತ್ ಅವರು ವನ್ಯಜೀವಿ, ಅರಣ್ಯ ಹಾಗೂ ಪರಿಸರದ ಬಗ್ಗೆ ಉಪನ್ಯಾಸ ನೀಡಿದರು. ಮಕ್ಕಳು ಅರಣ್ಯ ಕುರಿತು ಸಾಕ್ಷ ಚಿತ್ರ ವೀಕ್ಷಿಸಿದರು. ಎಲ್ಲರೂ ಖುಷಿಯಿಂದ ಪಾಲ್ಗೊಂಡರು’ ಎಂದು ನೆಲಮಂಗಲ ಪ್ರಾದೇಶಿಕ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು.

ಪಠ್ಯಪುಸ್ತಕದಲ್ಲಿನ ಓದಿಗಿಂತ ಪ್ರಕೃತಿ ಶಿಬಿರದಲ್ಲಿ ನೇರವಾಗಿ ತಿಳಿದುಕೊಂಡ ಮಾಹಿತಿ ಮಕ್ಕಳ ಮನಸ್ಸಿಗೆ ನಾಟಿತು.
- ದೀಪು, ಶಿಕ್ಷಕರು ಹೊನ್ನೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಸಾಕ್ಷ್ಯಚಿತ್ರ ಅರಣ್ಯ ನಡಿಗೆ ಪಕ್ಷಿ ವೀಕ್ಷಣೆ ಸಫಾರಿಯಿಂದ ಸಾಕಷ್ಟು ಮಾಹಿತಿಗಳನ್ನು ತಿಳಿದುಕೊಂಡೆ.
- ದಿವ್ಯ, 7ನೇ ತರಗತಿ ಹೊನ್ನೇನಹಳ್ಳಿ
ಹಲವು ಪ್ರಭೇದದ ಪ್ರಾಣಿ ಪಕ್ಷಿಗಳನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿತು. ಇದೊಂದು ಉತ್ತಮ ಅವಕಾಶ.  
-ಹಂಸಿಕಾ ಕುಮಾರಿ, 7ನೇ ತರಗತಿ ಬರಗೇನಹಳ್ಳಿ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.