ADVERTISEMENT

ನೆಲಮಂಗಲ: ಮರಿಯಕ್ಕ ತಾಯಿ ದೇವಸ್ಥಾನ ಜೀರ್ಣೋದ್ಧಾರ, ಪುನರ್‌ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 22 ಮೇ 2024, 15:46 IST
Last Updated 22 ಮೇ 2024, 15:46 IST
ಮರಿಯಕ್ಕ ತಾಯಿ ದೇವಸ್ಥಾನದ ಕಳಶ ಕುಂಭಾಭಿಷೇಕಕ್ಕಾಗಿ ಕುಂಭತೀರ್ಥವನ್ನು ಗೋಪುರದ ಮೇಲಕ್ಕೆ ತೆಗೆದುಕೊಂಡು ಹೋಗುತ್ತಿರುವುದು.
ಮರಿಯಕ್ಕ ತಾಯಿ ದೇವಸ್ಥಾನದ ಕಳಶ ಕುಂಭಾಭಿಷೇಕಕ್ಕಾಗಿ ಕುಂಭತೀರ್ಥವನ್ನು ಗೋಪುರದ ಮೇಲಕ್ಕೆ ತೆಗೆದುಕೊಂಡು ಹೋಗುತ್ತಿರುವುದು.   

ನೆಲಮಂಗಲ: ಜೀರ್ಣೋದ್ಧಾರಗೊಂಡಿರುವ ಪಟ್ಟಣದ ಗ್ರಾಮದೇವತೆ ಮರಿಯಕ್ಕ ತಾಯಿ ದೇವಸ್ಥಾನದ ಪುನರ್‌ ಪ್ರತಿಷ್ಠಾಪನಾ ಕಾರ್ಯ ಇತ್ತೀಚೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಗೋಪುರದ ಕಳಶಕ್ಕೆ ಕುಂಭಾಭಿಷೇಕ ನಡೆಯಿತು. ಪುನರ್‌ ಪ್ರಾತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ನಾಲ್ಕು ದಿನಗಳು ಅನ್ನಸಂತರ್ಪಣೆ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಪಟ್ಟಣದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾವಿರಾರು ಭಕ್ತರು ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗವಹಿಸಿದ್ದರು. 

ವಿಶೇಷವಾಗಿ ದೇವಿಗೆ ಎಲ್ಲ ಭಕ್ತರು ಹಾಲಿನ ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಹೋಮ ಹವನ, ದೇವಿ ನಾಮಾವಳಿಗಳ ಪಾರಾಯಣ, ಕಳಶಸ್ಥಾಪನೆ, ಚಕ್ರಸ್ಥಾಪನೆ, ಕುಂಭಾಭಿಷೇಕ, ಹೂವಿನ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ADVERTISEMENT

ಜೀರ್ಣೋದ್ಧಾರ ಪ್ರಕ್ರಿಯೆ

ಎಂಟು ವರ್ಷಗಳ ಹಿಂದೆ ಪಟ್ಟಣದ ಮುಖ್ಯರಸ್ತೆಯಾಗಿದ್ದ ಪೇಟೆಬೀದಿಯ ಹೆಬ್ಬಾಗಿಲಿನಲ್ಲಿದ್ದ ಗ್ರಾಮದೇವತೆ ಮರಿಯಕ್ಕ ತಾಯಿ ದೇವಸ್ಥಾನದ ಗೋಡೆಗಳು ಸೀಳುಬಿಟ್ಟು, ದೇವರ ವಿಗ್ರಹ ಭಿನ್ನವಾಗಿ ಶಿಥಿಲಾವಸ್ಥೆಗೆ ತಲುಪಿತ್ತು. ಹಿಂದೆ ಪುರಸಭೆ ಅಧ್ಯಕ್ಷರಾಗಿದ್ದ ದಿವಂಗತ ನೆ.ಲ.ಗಿರಿಧರ್‌ ಅವರು ಮುತುವರ್ಜಿವಹಿಸಿ ಈಗಿನ ದೇವಸ್ಥಾನ ಸಮಿತಿ ಅಧ್ಯಕ್ಷ ಸತೀಶ್‌, ನಗರಸಭೆ ಸದಸ್ಯ ಎನ್‌.ಜಿ.ರವಿಕುಮಾರ್‌, ಚಿಕ್ಕಹನುಮಯ್ಯ, ಬೈಲಪ್ಪ ಅವರನ್ನೊಳಗೊಂಡ ಸಮಿತಿ ರಚಿಸಿ, ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲು ತೀರ್ಮಾನಿಸಲಾಯಿತು. ದೇವಾಲಯ ಜೀರ್ಣೊದ್ಧಾರ ಕಾರ್ಯ ಆರಂಭವಾಯಿತು. ಆದರೆ, ನೋಟು ಅಮಾನ್ಯೀಕರಣ, ಕೋವಿಡ್‌ ಬಿಕ್ಕಟ್ಟು ಹಾಗೂ ಇತರೆ ಕಾರಣಗಳಿಂದಾಗಿ ಜೀರ್ಣೋದ್ಧಾರ ಕಾರ್ಯ ವಿಳಂಬವಾಯಿತು.

‘ಈಗ ಜೀರ್ಣೋದ್ಧಾರ ಕಾರ್ಯ ಮುಗಿದು, ಪುನರ್ ಪ್ರತಿಷ್ಠಾಪನೆಯೂ ಪೂರ್ಣಗೊಂಡಿದೆ. ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಸುಮಾರು ₹1.5 ಕೋಟಿ ವೆಚ್ಚವಾಗಿದೆ. ತಾಲ್ಲೂಕಿನಾದ್ಯಂತವಿರುವ ಎಲ್ಲ ಜನಾಂಗದವರೂ ಈ ಕಾರ್ಯಕ್ಕೆ ನೆರವಾಗಿದ್ದಾರೆ. ಪ್ರತಿಷ್ಠಾಪನಾ ಕಾರ್ಯಕ್ಕೆ ₹45 ಲಕ್ಷ ರಿಂದ ₹50 ಲಕ್ಷ ವೆಚ್ಚವಾಗಿದೆ‘ ಎಂದು ನಗರಸಭೆ ಸದಸ್ಯ ಎನ್‌.ಜಿ.ರವಿಕುಮಾರ್‌ ತಿಳಿಸಿದರು.

ಪುನರ್‌ ಪ್ರತಿಷ್ಠಪನೆಗೊಂಡ ಮರಿಯಕ್ಕ ತಾಯಿ ದೇವರ ವಿಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.