ADVERTISEMENT

‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಚಿತ್ರಕ್ಕೆ ತಾತ್ಕಾಲಿಕ ತಡೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 0:30 IST
Last Updated 22 ಏಪ್ರಿಲ್ 2024, 0:30 IST
   

ಬೆಂಗಳೂರು: ಕಿರಣ್‌ ತೋಟಂಬೈಲ್‌ ನೇತೃತ್ವದಲ್ಲಿ ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಸಿನಿಮಾ ನಿರ್ಮಾಣ, ಪ್ರಸಾರ ಮತ್ತು ಆ ಹೆಸರಿನಲ್ಲಿ ಜಾಹೀರಾತು ಪ್ರಕಟಿಸದಂತೆ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

‘ನಾಡಪ್ರಭು ಕೆಂಪೇಗೌಡ’ ಸಿನಿಮಾ ಶೀರ್ಷಿಕೆಯನ್ನು ನೋಂದಾಯಿಸಿರುವ ನಿರ್ದೇಶಕ ಟಿ.ಎಸ್‌. ನಾಗಾಭರಣ, ಲೇಖಕಿ ಪ್ರತಿಭಾ ನಂದಕುಮಾರ್‌, ಈಶ್ವರ ಎಂಟರ್‌ಟೇನ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್‌ ಹಾಗೂ ನಿರ್ಮಾಪಕರಾದ ಎಂ.ಎನ್‌. ಶಿವರುದ್ರಪ್ಪ ಮತ್ತು ರಾಹುಲ್‌ ಗುಂಡಾಲ ಅವರು ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಹೆಸರಿನಲ್ಲಿ ಸಿನಿಮಾ ನಿರ್ಮಾಣಕ್ಕೆ ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಕಿರಣ್‌ ತೋಟಂಬೈಲ್‌, ಚೇತನ್‌ ರಾಜ್‌, ಧರ್ಮೇಂದ್ರ ಕುಮಾರ್‌ ಅರೇಹಳ್ಳಿ, ದಿನೇಶ್‌ ಬಾಬು ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಧೀಶರು, ಪ್ರತಿವಾದಿಗಳು ಮತ್ತು ಅವರ ನೌಕರರು, ಏಜೆಂಟರು, ಪಾಲುದಾರರು, ಪ್ರತಿನಿಧಿಗಳು ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ಹೆಸರಿನ ಅಥವಾ ಆ ವಿಷಯ ಹೊಂದಿರುವ ಸಿನಿಮಾ ನಿರ್ಮಾಣ, ಪ್ರಸಾರ, ಜಾಹೀರಾತು ಪ್ರಕಟಿಸದಂತೆ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.