ADVERTISEMENT

ಬೆಂಗಳೂರು:ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್ ಸಂಚಾರಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 23:43 IST
Last Updated 13 ಮಾರ್ಚ್ 2024, 23:43 IST
ಓಕಳಿಪುರ ಜಂಕ್ಷನ್‌ ಬಳಿ ‘ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್’ನ ನೋಟ
ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್
ಓಕಳಿಪುರ ಜಂಕ್ಷನ್‌ ಬಳಿ ‘ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್’ನ ನೋಟ ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್   

ಬೆಂಗಳೂರು: ನಗರದ ಕೇಂದ್ರ ಭಾಗವಾದ ಗಾಂಧಿನಗರ, ಮೆಜೆಸ್ಟಿಕ್‌, ನಗರ ರೈಲು ನಿಲ್ದಾಣಕ್ಕೆ ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ ಹಾಗೂ ಮಾಗಡಿ ರಸ್ತೆಗೆ ಸಿಗ್ನಲ್‌ ಮುಕ್ತ ಸಂಪರ್ಕ ಕಲ್ಪಿಸುವ ‘ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್’ ಬುಧವಾರ ಅಧಿಕೃತವಾಗಿ ಲೋಕಾರ್ಪಣೆಗೊಂಡಿತು.

ಓಕಳಿಪುರದ ಜಂಕ್ಷನ್‌ ಕೇಂದ್ರೀಕೃತವಾಗಿರುವ ಈ ಕಾರಿಡಾರ್‌‌ನ, ಮಲ್ಲೇಶ್ವರದಿಂದ ಕೆಎಸ್‌ಆರ್‌ ರೈಲು ನಿಲ್ದಾಣ ಹಾಗೂ ರಾಜಾಜಿನಗರದಿಂದ ಕೆಎಸ್‌ಆರ್‌ ರೈಲು ನಿಲ್ದಾಣಕ್ಕೆ ಸಂಪರ್ಕಕಲ್ಪಿಸುವ ಎರಡು ಮಾರ್ಗಗಳ (ಲೂಪ್‌) ಅಭಿವೃದ್ಧಿಯಾಗಿದ್ದು, ಪೂರ್ಣ ಕಾರಿಡಾರ್‌ಗೆ ಇದೀಗ ಚಾಲನೆ ಸಿಕ್ಕಂತಾಗಿದೆ. 2013–14ರಲ್ಲಿ ಆರಂಭವಾಗಿದ್ದ ಓಕಳಿಪುರ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆಗೆ ಭೂಸ್ವಾಧೀನವೂ ಸೇರಿದಂತೆ ₹337 ಕೋಟಿ ವೆಚ್ಚವಾಗಿದೆ.

‘ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್’ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಲೋಕಾರ್ಪಣೆಗೊಳಿಸಿದರು.

ADVERTISEMENT

ಸಚಿವರಾದ ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದ ರಾಜು, ವಿಧಾನ ಪರಿಷತ್ ಸದಸ್ಯ ಯು.ಬಿ ವೆಂಕಟೇಶ್, ಮಾಜಿ ಸಚಿವ ಎಚ್.ಎಂ ರೇವಣ್ಣ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.

ಮೊದಲ ಹಂತದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾದ ಸೌಕರ್ಯ

* ರೈಲು ನಿಲ್ದಾಣದಿಂದ ಮಲ್ಲೇಶ್ವರ ಹಾಗೂ ಮೆಜೆಸ್ಟಿಕ್ ಕಡೆಗೆ ಮೇಲ್ಸೇತುವೆ.

* ಮಲ್ಲೇಶ್ವರದಿಂದ ರಾಜಾಜಿನಗರ ಕಡೆಗೆ ಸಂಚರಿಸಲು ಕೆಳಸೇತುವೆ.

*  ಚೆನ್ನೈ ಹಾಗೂ ತುಮಕೂರು ಕಡೆಗೆ ಸಂಚರಿಸುವ ರೈಲ್ವೆ ಮಾರ್ಗದ ಹಳಿಗಳ ಕೆಳಗೆ ರೈಲ್ವೆ ಇಲಾಖೆವತಿಯಿಂದ ನಿರ್ಮಿಸಿದ ಐದು ಕೆಳಸೇತುವೆಗಳು.

ಬುಧವಾರ ಉದ್ಘಾಟನೆಗೊಂಡಿದ್ದು

* ರಾಜಾಜಿನಗರ ಹಾಗೂ ಮಲ್ಲೇಶ್ವರದಿಂದ ಕೆಎಸ್‌ಆರ್‌ ರೈಲು ನಿಲ್ದಾಣದ ಪ್ರವೇಶ ದ್ವಾರದ ಕಡೆಗೆ ಏಕಮುಖ ಸಂಚಾರದ ಎರಡು ಮೇಲ್ಸೇತುವೆ

* ರೈಲ್ವೆ ಇಲಾಖೆ ವತಿಯಿಂದ ಬೆಂಗಳೂರು - ತುಮಕೂರು ಮಾರ್ಗದ ಕೆಳಸೇತುವೆ

ಪ್ರಗತಿಯಲ್ಲಿರುವುದು..

* ರೈಲ್ವೆ ಇಲಾಖೆವತಿಯಿಂದ ನಡೆಯುತ್ತಿರುವ ಬೆಂಗಳೂರು ಚೆನ್ನೈ ರೈಲು ಮಾರ್ಗದ ಹಳಿಗಳ ಕೆಳಭಾಗದ ಎರಡು ಕೆಳ ಸೇತುವೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಅದು ಪೂರ್ಣಗೊಂಡರೆ ಮೆಜೆಸ್ಟಿಕ್‌ನಿಂದ ರಾಜಾಜಿನಗರ ಮತ್ತು ರೈಲು ನಿಲ್ದಾಣದ ಪ್ರವೇಶ ದ್ವಾರದ ಕಡೆಗೆ ಸಂಚಾರಕ್ಕೆ ಅವಕಾಶ ಸಿಗಲಿದೆ.

ಸಂಪಿಗೆ ರಸ್ತೆ ಮೆಟ್ರೊ ನಿಲ್ದಾಣದ ಬಳಿ ಅನಾವರಣಗೊಂಡಿರುವ ರಾಜೀವ್ ಗಾಂಧಿ ಕಂಚಿನ ಪ್ರತಿಮೆ - ಪ್ರಜಾವಾಣಿ ಚಿತ್ರ
ರಾಜೀವ್‌ ಗಾಂಧಿ ಕಂಚಿನ ಪ್ರತಿಮೆ ಅನಾವರಣ
ಶೇಷಾದ್ರಿಪುರ– ಮಲ್ಲೇಶ್ವರ ಜಂಕ್ಷನ್‌ನ ರಾಜೀವ್‌ ಗಾಂಧಿ ಸ್ಕ್ವೇರ್‌ನಲ್ಲಿ ‘ರಾಜೀವ್‌ ಗಾಂಧಿಯವರ ಕಂಚಿನ ಪ್ರತಿಮೆ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅನಾವರಣಗೊಳಿಸಿದರು. 15ನೇ ಹಣಕಾಸು ಆಯೋಗದಡಿಯಲ್ಲಿ ವಾಯು ಗುಣಮಟ್ಟದ ಸುಧಾರಣೆ ಅನುದಾನದಲ್ಲಿ ಜಂಕ್ಷನ್‌ಗಳ ಅಭಿವೃದ್ಧಿ ಹಾಗೂ ಉಪ ಮುಖ್ಯಮಂತ್ರಿಯವರ ಅನುದಾನದಲ್ಲಿ ರಾಜೀವ್‌ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಒಟ್ಟು 2.65 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಾಜೀವ್ ಗಾಂಧಿಯವರ ಕಂಚಿನ ಪ್ರತಿಮೆ ಪೀಠ ಸೇರಿದಂತೆ 15 ಅಡಿ ಎತ್ತರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.