ಬೆಂಗಳೂರು: ಸ್ವಂತ ವಾಹನ ಹೊಂದುವ ಆಸೆಯಿಂದ ರಸ್ತೆ ಬದಿ ನಿಲ್ಲಿಸಿದ್ದ ಟೆಂಪೊ ಟ್ರಾವಲರ್ (ಟಿಟಿ) ಕಳವು ಮಾಡಿದ್ದ, ಬ್ಯಾಡರಹಳ್ಳಿಯ ನಿವಾಸಿ ಗಜೇಂದ್ರ (35) ಎಂಬಾತನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ₹2.5 ಲಕ್ಷ ಮೌಲ್ಯದ ವಾಹನ ಜಪ್ತಿ ಮಾಡಿಕೊಂಡಿದ್ದಾರೆ.
ಸೋಲದೇವನಹಳ್ಳಿ ವ್ಯಾಪ್ತಿಯ ಆಚಾರ್ಯ ಕಾಲೇಜು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಿ.ಟಿ ವಾಹನ ಕಳುವಾಗಿದ್ದು, ಈ ಬಗ್ಗೆ ಸೋಲನದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
‘ಕೃತ್ಯ ನಡೆದ ಸ್ಥಳದ ವ್ಯಾಪ್ತಿಯ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಗಳಿಬ್ಬರನ್ನು ಗುರುತಿಸಲಾಗಿತ್ತು. ಅದರಲ್ಲಿ ಗಜೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತನು ವಾಹನ ಚಾಲಕನಾಗಿದ್ದು, ಸ್ವಂತ ವಾಹನ ಹೊಂದುವ ಉದ್ದೇಶದಿಂದ ಕಳ್ಳತನ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ಹೇಳಿದರು. ‘ಇನ್ನೊಬ್ಬ ಆರೋಪಿ ಶಿವು ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ತನಿಖೆ ಮುಂದುವರೆಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.