ADVERTISEMENT

ಬೆಂಗಳೂರು | ಒಂಟಿ ಮನೆ, ವಿಲ್ಲಾಗಳಲ್ಲಿ ಕಳ್ಳತನ: ಆರೋಪಿಗಳಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 20:13 IST
Last Updated 1 ಅಕ್ಟೋಬರ್ 2024, 20:13 IST
ಸುಬ್ರಮಣ್ಯನಗರ ಠಾಣೆ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣವನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ವೀಕ್ಷಿಸಿದರು
ಸುಬ್ರಮಣ್ಯನಗರ ಠಾಣೆ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಚಿನ್ನಾಭರಣವನ್ನು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ವೀಕ್ಷಿಸಿದರು   

ಬೆಂಗಳೂರು: ನಗರದಲ್ಲಿ ಒಂಟಿ ಮನೆ ಹಾಗೂ ವಿಲ್ಲಾಗಳನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಮೃತಹಳ್ಳಿ ನಿವಾಸಿಗಳಾದ ಇಸಾಯಿರಾಜ್, ರಾಮಕುಮಾರ್ ಎಂಬುವರನ್ನು ಬಂಧಿಸಿ, ₹31.09 ಲಕ್ಷ ಮೌಲ್ಯದ 437.25 ಗ್ರಾಂ. ಚಿನ್ನಾಭರಣ, 85 ಗ್ರಾಂ ಬೆಳ್ಳಿ ವಸ್ತು ವಶಪಡಿಸಿಕೊಳ್ಳಲಾಗಿದೆ.

ಬಸವ ಲೇಔಟ್‌ನ ಚೊಕ್ಕನಹಳ್ಳಿ ಗ್ರಾಮದ ನಿವಾಸಿ ರಮೇಶ್‌ ಎಂಬುವವರು ಕುಟುಂಬ ಸಮೇತ ಮಾರ್ಚ್ 26ರಂದು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕಾಗಿ ಕೇರಳಕ್ಕೆ ತೆರಳಿದ್ದರು. ವಾಪಸ್ ಮನೆಗೆ ಬಂದು ನೋಡಿದಾಗ ಬೀರುವಿನ ಲಾಕರ್‌ನಲ್ಲಿ ಇಟ್ಟಿದ್ದ ನಗದು ಹಾಗೂ ಚಿನ್ನಾಭರಣ ಕಳ್ಳತನವಾಗಿತ್ತು.

ADVERTISEMENT

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಹಾಗೂ ಬಾತ್ಮಿದಾರರ ಮಾಹಿತಿ ಆಧರಿಸಿ ತಮಿಳುನಾಡಿನ ಅತಿಯೂರು ಬಸ್‌ ನಿಲ್ದಾಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದರು.

'ನಗರದ ವಿವಿಧ ಮನೆ ಹಾಗೂ ವಿಲ್ಲಾಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿ ನೀಡಿದ ಮಾಹಿತಿ ಮೇರೆಗೆ ಅತಿಯೂರಿನ ಮನೆಯಲ್ಲಿ ಬಚ್ಚಿಟ್ಟಿದ್ದ 413 ಗ್ರಾಂ. ಚಿನ್ನ, 85 ಗ್ರಾಂ. ಬೆಳ್ಳಿ ಹಾಗೂ 24.5 ಗ್ರಾಂ. ಚಿನ್ನದ ಸರವನ್ನು ಸ್ಮೇಹಿತನ ಮನೆಯಲ್ಲಿ ವಶಪಡಿಸಿಕೊಳ್ಳಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮನೆ ಕಳವು ಹಾಗೂ ವಾಹನ ಕಳ್ಳತನ ಸೇರಿ ಇಸಾಯಿರಾಜ್ ವಿರುದ್ಧ ಹತ್ತು ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಬಂಧನದಿಂದ ಬಾಗಲೂರು ಠಾಣೆಯಲ್ಲಿ 2, ಯಲಹಂಕ ನ್ಯೂಟೌನ್ ಠಾಣೆಯ ಒಂದು ಪ್ರಕರಣ ಪತ್ತೆಯಾಗಿವೆ. ಕದ್ದ ವಸ್ತು ಮಾರಾಟ ಮಾಡಿ ಬಂದ ಹಣದಲ್ಲಿ ಆರೋಪಿಗಳು ವಿಲಾಸಿ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.