ಬೆಂಗಳೂರು: ನಕಲಿ ಕೀ ಮಾಡಿಸಿಕೊಂಡು ಮಾಲೀಕರ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಬಾಡಿಗೆದಾರನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎ.ನಾರಾಯಣಪುರದ ಸೆಲ್ವರಾಜ್(56) ಬಂಧಿತ ಆರೋಪಿ.
ಆರೋಪಿಯಿಂದ ₹4.30 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹72 ಸಾವಿರ ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಎ.ನಾರಾಯಣಪುರದಲ್ಲಿ ಮಾಲೀಕರಾದ ಅಲವೇಲು ನೆಲೆಸಿದ್ದರು. ಅವರ ಮನೆಯಿಂದ 100 ಮೀಟರ್ ದೂರದಲ್ಲಿ ಖಾಲಿ ಜಾಗವಿತ್ತು. ಅಲ್ಲಿ ನಾಲ್ಕು ಶೆಡ್ ನಿರ್ಮಿಸಿ ಬಾಡಿಗೆಗೆ ನೀಡಿದ್ದರು. ಆರೋಪಿ ಒಂದು ಶೆಡ್ನಲ್ಲಿ ನೆಲೆಸಿದ್ದ. ಬಾಡಿಗೆ ನೀಡುವಾಗ ಮನೆ ಮಾಲೀಕರು ಕೀ ಇಡುವ ಸ್ಥಳ ನೋಡಿಕೊಂಡಿದ್ದ. ಕೀ ಕೊಂಡೊಯ್ದು ನಕಲಿ ಮಾಡಿಸಿಕೊಂಡಿದ್ದ. ಮನೆಯ ಮಾಲೀಕರು ಮೇ 7ರಂದು ತಮಿಳುನಾಡಿನ ದೇವಸ್ಥಾನಕ್ಕೆ ಹೋಗಿದ್ದರು. ಅಂದು ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದ’ ಎಂದು ಪೊಲೀಸರು ಹೇಳಿದರು.
‘ದೇವಸ್ಥಾನದಿಂದ ಮೇ 9ರಂದು ಅಲವೇಲು ಅವರು ವಾಪಸ್ ಬಂದಿದ್ದರು. ಮೇ 15ರಂದು ಬೀರು ತೆರೆದು ನೋಡಿದಾಗ ಚಿನ್ನಾಭರಣ ಹಾಗೂ ನಗದು ಇರಲಿಲ್ಲ. ಅವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು. ಆರೋಪಿ ಆಟೊ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.