ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ ರೈಲುಗಳ ದಟ್ಟಣೆ ಕಡಿಮೆ ಮಾಡಲು ಮೂರು ಜೋಡಿ ರೈಲುಗಳ ನಿಲುಗಡೆಯನ್ನು ಬೇರೆ ನಿಲ್ದಾಣಗಳಿಗೆ ಸ್ಥಳಾಂತರಿಸಲು ರೈಲ್ವೆ ಮಂಡಳಿ ಅನುಮತಿ ನೀಡಿದೆ.
ಯಶವಂತಪುರ ರೈಲು ನಿಲ್ದಾಣಕ್ಕೆ ಬರುತ್ತಿದ್ದ ಈ ರೈಲುಗಳು ಜೂನ್ 24ರಿಂದ ಬದಲಿ ಮಾರ್ಗದಲ್ಲಿ ಸಂಚರಿಸಲಿವೆ.
ದಾದರ್ – ತಿರುನೆಲ್ವೇಲಿ ಮತ್ತು ತಿರುನೆಲ್ವೇಲಿ–ದಾದರ್ ಎಕ್ಸ್ಪ್ರೆಸ್ ರೈಲು ಯಶವಂತಪುರ, ಬಾಣಸವಾಡಿ, ಹೊಸೂರು, ಧರ್ಮಪುರಿ– ಓಮಲೂರು ಮೂಲಕ ಸಂಚರಿಸುವ ಬದಲು ಚಿಕ್ಕಬಾಣಾವರ, ಯಶವಂತಪುರ ಬೈಪಾಸ್, ಲೊಟ್ಟೆಗೊಲ್ಲಹಳ್ಳಿ, ಬೈಯ್ಯಪ್ಪನಹಳ್ಳಿ ಮೂಲಕ ಚಲಿಸಲಿವೆ. ಚಿಕ್ಕಬಾಣಾವರ ಮತ್ತು ಬೈಯಪ್ಪನಹಳ್ಳಿ ಎಸ್ಎಂವಿಟಿಯಲ್ಲಿ ನಿಲುಗಡೆಯನ್ನು ಹೊಂದಿದೆ.
ದಾದರ್-ಪುದುಚೇರಿ ಮತ್ತು ಪುದುಚೇರಿ-ದಾದರ್ ಎಕ್ಸ್ಪ್ರೆಸ್ ರೈಲು ಯಶವಂತಪುರ, ಬಾಣಸವಾಡಿ, ಕೃಷ್ಣರಾಜಪುರ, ಬಂಗಾರಪೇಟೆ, ಜೋಲಾರಪೇಟೆ ಮೂಲಕ ಸಂಚರಿಸುತ್ತಿರುವುದನ್ನು ಕೈಬಿಟ್ಟು, ಚಿಕ್ಕಬಾಣಾವರ, ಯಶವಂತಪುರ ಬೈಪಾಸ್, ಲೊಟ್ಟೆಗೊಲ್ಲಹಳ್ಳಿ ಬಂಗಾರಪೇಟೆ ಮೂಲಕ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ. ಚಿಕ್ಕಬಾಣಾವರ ಮತ್ತು ಬೈಯಪ್ಪನಹಳ್ಳಿ ಎಸ್ಎಂವಿಟಿಯಲ್ಲಿ ನಿಲುಗಡೆ ಹೊಂದಿವೆ.
ಎಸ್ಎಸ್ಎಸ್ ಹುಬ್ಬಳ್ಳಿ– ಎಂಜಿಆರ್ ಚೆನ್ನೈ ಸೆಂಟ್ರಲ್ ಹಾಗೂ ಎಂಜಿಆರ್ ಚೆನ್ನೈ ಸೆಂಟ್ರಲ್–ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ಯಶವಂತಪುರ, ಬಾಣಸವಾಡಿ, ಕೃಷ್ಣರಾಜಪುರ, ಬಂಗಾರಪೇಟೆ, ಜೋಲಾರಪೇಟೆ ಬದಲು ಚಿಕ್ಕಬಾಣಾವರ, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ ಬೈಪಾಸ್, ಬಂಗಾರಪೇಟೆ ಮೂಲಕ ಸಂಚರಿಸಲಿದೆ. ಈ ರೈಲುಗಳು ಎಸ್ಎಂವಿಟಿ ಮತ್ತು ವೈಟ್ಫೀಲ್ಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.