ನೆಲಮಂಗಲ: ಸೃಜನಶೀಲತೆಯ ಸಂಕೇತವಾದ ಕವಿ ಅಂಬರೀಷ್ ಸರ್ವರಿಗೂ ಗೆಳೆತನದ ಮಧುವ ಹಂಚಿ, ತ್ಯಾಮಗೊಂಡ್ಲುವಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದರು ಎಂದು ಲೇಖಕಿ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ತ್ಯಾಮಗೊಂಡ್ಲುವಿನಲ್ಲಿ ಯುಗಾದಿ ಹಬ್ಬದಂದು ಕವಿ ‘ತ್ಯಾಮಗೊಂಡ್ಲು ಅಂಬರೀಷ್ ಅಭಿಮಾನಿ ಬಳಗ’ ಆಯೋಜಿಸಿದ್ದ ‘ಅಂಬರೀಷ್ ಸ್ಮರಣೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.
‘ಅಂಬರೀಷ್ ಅವರ ಲಲಿತ ಪ್ರಬಂಧಗಳು ಜನಮಾನಸದಲ್ಲಿ ಸದಾ ಹಸಿರಾಗಿವೆ. ಭಾವಗೀತೆಗಳು ಗುಂಗುಹಿಡಿಸುವಂತಹವು’ ಎಂದು ನೆನಪಿಸಿಕೊಂಡರು.
‘ಬಹುಮುಖ ಪ್ರತಿಭೆಯಾಗಿದ್ದ ಅಂಬರೀಷ್ ಅವರು ನಾಟಕ ರಚನೆ, ನಿರ್ದೇಶನ ಮತ್ತು ಅಭಿನಯದಲ್ಲೂ ಪಾರಂಗತರಾಗಿದ್ದರು. ತಂಡ ಕಟ್ಟಿಕೊಂಡು ಮೇಲಿಂದ ಮೇಲೆ ನಾಟಕ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದರು’ ಎಂದು ಶ್ಲಾಘಿಸಿದರು.
ಕನ್ನಡ ಪ್ರಾಧ್ಯಾಪಕಿ ಲಕ್ಷ್ಮೀನರಸಮ್ಮ ಯುಗಾದಿ ಆಚರಣೆಯ ವಿಶೇಷತೆ ವಿವರಿಸಿದರು. ಪ್ರಾಧ್ಯಾಪಕ ರಹಮತ್ ಉಲ್ಲ ಅವರು ಅಂಬರೀಷರ ಸಾಹಿತ್ಯ ಸೇವೆಯನ್ನು ಪರಿಚಯಿಸಿದರು. ಬಳಗದ ಅಧ್ಯಕ್ಷ ಸಿ.ಆರ್.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಂಜುನಾಥ್, ಕೆ.ಎಲ್.ರಘು ಇದ್ದರು.
ಇದೇ ವೇಳೆ ಗುರುಕುಲ ತಂಡದವರು ‘ಉಂಡೆನಾಮ.ಕಾಮ್’ ನಾಟಕ ಪ್ರದರ್ಶಿಸಿದರು. ನಂತರ ಬೇವು– ಬೆಲ್ಲ ಹಂಚಿ ಯುಗಾದಿ ಹಬ್ಬ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.