ಬೆಂಗಳೂರು: ಪ್ರಯಾಣಿಕರೊಬ್ಬರಿಂದ ₹ 914 ಬದಲು ₹ 5,194 ಪಡೆದು ಪರಾರಿಯಾಗಿರುವ ಕ್ಯಾಬ್ ಚಾಲಕನ ವಿರುದ್ಧ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ತಾವರೆಕೆರೆ ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಹೆಚ್ಚುವರಿ ಪ್ರಯಾಣ ದರ ವಸೂಲಿ ಮಾಡಿರುವ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಜ. 5ರಂದು ಸ್ನೇಹಿತರನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಹೋಗಿದ್ದರು. ಸ್ನೇಹಿತರು ಹೊರಟ ನಂತರ ತಾವರೆಕೆರೆಯ ಮನೆಗೆ ವಾಪಸು ಹೋಗಲು ದೂರುದಾರ, ಉಬರ್ ಆ್ಯಪ್ ಮೂಲಕ ಕ್ಯಾಬ್ ಕಾಯ್ದಿರಿಸಿದ್ದರು. ಆ್ಯಪ್ನಲ್ಲಿ ₹ 914 ಪ್ರಯಾಣ ದರ ತೋರಿಸಿತ್ತು.’
‘ಉಬರ್ ಕ್ಯಾಬ್ ಚಾಲಕನೆಂದು ಹೇಳಿಕೊಂಡು ಸ್ಥಳಕ್ಕೆ ಬಂದಿದ್ದ ಆರೋಪಿ, ದೂರುದಾರನನ್ನು ಹತ್ತಿಸಿಕೊಂಡು ಸ್ಥಳದಿಂದ ಹೊರಟಿದ್ದರು. ತಾವರೆಕೆರೆಯಲ್ಲಿ ದೂರುದಾರರನ್ನು ಇಳಿಸಿದ್ದ ಆರೋಪಿ, ₹ 5,194 ನೀಡುವಂತೆ ಒತ್ತಾಯಿಸಿದ್ದ. ತಮ್ಮ ಮೊಬೈಲ್ನಲ್ಲಿ ₹ 914 ಇರುವುದಾಗಿ ದೂರುದಾರ ಹೇಳಿದ್ದರು. ತನ್ನ ಮೊಬೈಲ್ನಲ್ಲಿ ₹ 5,194 ಇರುವುದಾಗಿ ಹೇಳಿ ಜಗಳ ಮಾಡಿ ಹಣ ಪಡೆದು ಆರೋಪಿ ಸ್ಥಳದಿಂದ ಹೊರಟು ಹೋಗಿದ್ದಾನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.