ಬೆಂಗಳೂರು: ‘ವಚನಗಳು ಅಂತರಂಗದ ಬೆಳಕಾಗಿದ್ದು, ಬದುಕನ್ನು ನಡೆಸಲು ಮಾರ್ಗದರ್ಶಿಯವಾಗಿವೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.
ಪ್ರಪುಣ್ಯ - ವಚನಜ್ಯೋತಿ ಬಳಗ ಆಯೋಜಿಸಿದ್ದ ‘ವಚನ ಗಾನಯಾನ -5’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅತ್ಯಂತ ಸರಳವಾಗಿ ಮನಕ್ಕೆ ಮುಟ್ಟುವಂತೆ ಬಸವಣ್ಣನವರು ಮತ್ತು ಇತರ ವಚನಕಾರರು ನಮಗೆ ನೀಡಿರುವ ವಚನಗಳು ಕನ್ನಡದ ಅಮೂಲ್ಯ ಸಂಪತ್ತು. ವಚನ ಗಾನಯಾನದ ಮೂಲಕ ವಿದ್ಯಾರ್ಥಿಗಳಿಗೆ ವಚನಗಳನ್ನು ಕಲಿಸಿ ಹಾಡಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.
‘ಬಸವಣ್ಣ ಮಹಾದೇವಿಯಕ್ಕನಿಗೆ ಸೀಮಿತವಾಗದೆ ಉರಿಲಿಂಗಪೆದ್ದಿ, ಉಳಿಯುಮೇಶ್ಚರ ಚಿಕ್ಕಣ್ಣ ಮೊದಲಾದವರ ವಚನಗಳನ್ನು ಕಲಿಸಿರುವ ಈರಯ್ಯ ಚಿಕ್ಕಮಠರು ಪ್ರಶಂಸಾರ್ಹರು’ ಎಂದು ಬಣ್ಣಿಸಿದರು.
ಪ್ರಪುಣ್ಯ ಸಂಗೀತ ಶಾಲೆಯ ಈರಯ್ಯ ಚಿಕ್ಕಮಠರು ಮಾತನಾಡಿ, ‘ಕೋವಿಡ್ ಸಮಯದಲ್ಲಿ ಆರಂಭವಾದ ವಚನ ಗೀತಯಾನ ಇದೀಗ ಐದನೇ ವರ್ಷಕ್ಕೆ ಕಾಲಿಟ್ಟಿದೆ’ ಎಂದರು.
ವಚನಜ್ಯೋತಿ ಬಳಗದ ಗೌರವಾಧ್ಯಕ್ಷ ಮಹೇಶ ಬೆಲ್ಲದ್, ಬಳಗದ ಶಶಿ ವಿಶ್ವನಾಥ್, ಕಾಂಗ್ರೆಸ್ ಮುಖಂಡ ಎಂ. ನಂಜಪ್ಪ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಿಸಿದರು.
ಬಾಲಪ್ರತಿಭೆಗಳಾದ ಪೂರ್ಣಿಕ, ಪ್ರಪುಣ್ಯ, ವೇದಾಂತ್, ಸನ್ನಿಧಿ, ಗಾನಶ್ರೀ ಸೇರಿದಂತೆ ಹಿರಿಯ ವಿದ್ಯಾರ್ಥಿಗಳಾದ ಕೆಂಪರಾಜು, ಉಮೇಶ್, ಅಕ್ಷತಾ, ವಿಜಯಲಕ್ಷ್ಮಿ, ಭಾಗ್ಯ ಅವರು ವಚನ ಸುಧೆ ಹರಿಸಿದರು.
ಗಾಯಕಿ ಟಿ.ಎಂ. ಜಾನಕಿ, ಉಮೇಶ್ ಆರಾಧ್ಯ, ನಿಶಾ, ಚಂದ್ರಶೇಖರ್, ಕೇಶವಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.