ADVERTISEMENT

ಬೆಂಗಳೂರು | ಟ್ಯಾಂಕರ್– ಬೈಕ್ ಅಪಘಾತ: ಹಿಂಬದಿ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 15:34 IST
Last Updated 15 ಏಪ್ರಿಲ್ 2024, 15:34 IST
<div class="paragraphs"><p>ಸಾವು (ಸಾಂಕೇತಿಕ ಚಿತ್ರ)</p></div>

ಸಾವು (ಸಾಂಕೇತಿಕ ಚಿತ್ರ)

   

ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನೀರಿನ ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಹಿಂಬದಿ ಸವಾರ ಆರ್. ಹರೀಶ್ (32) ಎಂಬುವವರು ಮೃತಪಟ್ಟಿದ್ದಾರೆ.

‘ಅಂದ್ರಹಳ್ಳಿಯ ಹರೀಶ್, ಆಟೊ ಚಾಲಕ. ಸ್ನೇಹಿತ ಸುಚೀತ್ ಜೊತೆ ಭಾನುವಾರ ತಡರಾತ್ರಿ ಬೈಕ್‌ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಸುಚೀತ್ ಬೈಕ್ ಚಲಾಯಿಸುತ್ತಿದ್ದರು. ಹಿಂಬದಿಯಲ್ಲಿ ಹರೀಶ್ ಕುಳಿತಿದ್ದರು. ಮಾಗಡಿ ಮುಖ್ಯರಸ್ತೆಯಿಂದ ಹೊಸಹಳ್ಳಿಗೆ ಸಂಪರ್ಕ ಕಲ್ಪಿಸುವ ತುಂಗಾನಗರ ಮುಖ್ಯರಸ್ತೆಯಲ್ಲಿ ಬೈಕ್‌ ಹೊರಟಿತ್ತು. ಇದೇ ರಸ್ತೆಯಲ್ಲಿ ಎದುರಿಗೆ ಬಂದ ನೀರಿನ ಟ್ಯಾಂಕರ್, ಬೈಕ್‌ಗೆ ಡಿಕ್ಕಿ ಹೊಡೆದಿತ್ತು’

‘ಅಪಘಾತದಿಂದಾಗಿ ಬೈಕ್ ಉರುಳಿಬಿದ್ದಿತ್ತು. ಹಿಂಬದಿ ಸವಾರ ಹರೀಶ್ ಅವರು ನೀರಿನ ಟ್ಯಾಂಕರ್‌ ಅಡಿ ಸಿಲುಕಿದ್ದರು. ಅತೀ ವೇಗದಲ್ಲಿದ್ದ ಟ್ಯಾಂಕರ್, ಹರೀಶ್‌ ಅವರನ್ನು ಉಜ್ಜಿಕೊಂಡು ಕೆಲ ಮೀಟರ್ ಮುಂದಕ್ಕೆ ಹೋಗಿ ನಿಂತುಕೊಂಡಿತ್ತು’ ಎಂದು ಪೊಲೀಸರು ಹೇಳಿದರು.

‘ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರೀಶ್ ಹಾಗೂ ಗಾಯಾಳು ಸುಚಿತ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಹರೀಶ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು. ಸುಚಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

‘ನೀರಿನ ಟ್ಯಾಂಕರ್ ಚಾಲಕನ ಅತೀ ವೇಗದ ಚಾಲನೆ ಹಾಗೂ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹರೀಶ್ ಪತ್ನಿ ನೀಡಿರುವ ದೂರು ಆಧರಿಸಿ, ‘ಶ್ರೀ ಕೃಷ್ಣ ವಾಟರ್ ಟ್ಯಾಂಕರ್’ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತದ ಬಳಿಕ ಟ್ಯಾಂಕರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.