ADVERTISEMENT

ಬೆಂಗಳೂರು | 25ರಿಂದ ವಸಂತೋತ್ಸವ ಸಾಂಸ್ಕೃತಿಕ ಮೇಳ

​ಪ್ರಜಾವಾಣಿ ವಾರ್ತೆ
Published 18 ಮೇ 2024, 16:16 IST
Last Updated 18 ಮೇ 2024, 16:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಇನ್ಫೊಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನ ಜಂಟಿಯಾಗಿ ಇದೇ 25ರಿಂದ 31ರವರೆಗೆ ‘ವಸಂತೋತ್ಸವ’ ಶೀರ್ಷಿಕೆಯಡಿ ಸಾಂಸ್ಕೃತಿಕ ಮೇಳ ಹಮ್ಮಿಕೊಂಡಿದೆ. 

ಭಾರತೀಯ ವಿದ್ಯಾಭವದ ಖಿಂಚಾ ಸಭಾಂಗಣದಲ್ಲಿ ಈ ಮೇಳ ನಡೆಯಲಿದ್ದು, 25ರ ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಏಳು ದಿನಗಳು ನಡೆಯುವ ಈ ಮೇಳದಲ್ಲಿ ನೃತ್ಯಪ್ರದರ್ಶನ, ಸಂಗೀತೋತ್ಸವ, ಚಿತ್ರಕಲಾ ಶಿಬಿರ, ಕವಿಗೋಷ್ಠಿ, ವಾದ್ಯಗೋಷ್ಠಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 15 ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ 170ಕ್ಕೂ ಅಧಿಕ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. 

ADVERTISEMENT

ಕಲಾವಿದ ಮಿಥುನ್ ಶ್ಯಾಮ್ ಮತ್ತು ತಂಡದಿಂದ ‘ವಸಂತ ವೈಭವ’ ಭರತನಾಟ್ಯ, ಪ್ರವೀಣ್ ಡಿ. ರಾವ್ ಮತ್ತು ತಂಡದಿಂದ ‘ಕೋಗಿಲೆ ಹಾಡಿತು’ ಸಂಗೀತ ಕಾರ್ಯಕ್ರಮ, ತಿರುಮಲ ಶ್ರೀನಿವಾಸ್ ಮತ್ತು ತಂಡದಿಂದ ‘ವಸಂತ’ ವಾದ್ಯಗೋಷ್ಠಿ, ಪವನ್ ರಂಗಾಚಾರ್ ಮತ್ತು ತಂಡದಿಂದ ‘ವಸಂತ’ ಗಾಯನ, ಪ್ರತಿಭಾ ನಂದಕುಮಾರ್ ಮತ್ತು ತಂಡದಿಂದ ‘ವಸಂತ’ ಕವಿಗೋಷ್ಠಿ, ಶರ್ಮಿಳಾ ಮುಖರ್ಜಿ ಮತ್ತು ತಂಡದಿಂದ ‘ವಸಂತ ಋತುವಿನ ಹಬ್ಬಗಳು’ ಒಡಿಸ್ಸಿ ನೃತ್ಯ, ದಿವಾಕರ್ ಹೆಗಡೆ ಕೆರೆಹೊಂಡ ಮತ್ತು ತಂಡದಿಂದ ‘ತಾಳಮದ್ದಳೆ’ ನಡೆಯಲಿದೆ ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ತಿಳಿಸಿದ್ದಾರೆ.

ವೀಣಾ-ಧನ್ಯ ಮತ್ತು ತಂಡದಿಂದ ‘ಮೋಹಿನಿ ಅಟ್ಟಂ’, ಲಲಿತಾ ಶ್ರೀನಿವಾಸನ್ ಅವರ ನಿರ್ದೇಶನದಲ್ಲಿ ‘ಬಾರೋ ವಸಂತ’ ಭರತನಾಟ್ಯ, ಪ್ರತಿಭಾ ನಾರಾಯಣ್ ಮತ್ತು ತಂಡದಿಂದ ‘ಸುಂದರಕಾಂಡ’ ಪೌರಾಣಿಕ ನಾಟಕ, ಪರಮೇಶ್ವರ ಹೆಗ್ಡೆ ನಿರ್ದೇಶನದಲ್ಲಿ ‘ಲಲಿತ್ ರಾಗ ರಸ’ ಹಿಂದೂಸ್ಥಾನಿ ಸಂಗೀತ, ಟಿ.ಎಸ್. ಸತ್ಯವತಿ ಮತ್ತು ತಂಡದಿಂದ ‘ವಸಂತರಾಗ’ ಕರ್ನಾಟಕ ಸಂಗೀತ ಕಾರ್ಯಕ್ರಮ ಉತ್ಸವದ ಆಕರ್ಷಣೆ ಎಂದು ಹೇಳಿದ್ದಾರೆ.

ಪ್ರತಿದಿನವೂ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ಗಂಟೆಯವರೆಗೆ, ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ವಸಂತ ಋತುವಿಗೆ ಸಂಬಂಧಿಸಿದ ಚಿತ್ರಕಲಾ ಪ್ರದರ್ಶನ ಇರಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.