ADVERTISEMENT

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ: ವಿಸ್ತೀರ್ಣ ಇಳಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 20:09 IST
Last Updated 27 ಸೆಪ್ಟೆಂಬರ್ 2024, 20:09 IST
ಪರಿಸರಕ್ಕಾಗಿ ನಾವು
ಪರಿಸರಕ್ಕಾಗಿ ನಾವು   

ಬೆಂಗಳೂರು: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು 16,114 ಚ. ಕಿ.ಮೀಗೆ ಇಳಿಸುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿರುವ ‘ಪರಿಸರಕ್ಕಾಗಿ ನಾವು’ ಸಂಘಟನೆ, ‘ಮಾಧವ ಗಾಡ್ಗೀಳ್ ಸಮಿತಿ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದೆ.

‘ಸಚಿವ ಸಂಪುಟ ಸಭೆ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ತೀರ್ಮಾನ ತೆಗೆದುಕೊಂಡಿದೆ. ಆದರೆ, ಪಶ್ಚಿಮ ಘಟ್ಟಗಳ ಸಂರಕ್ಷಿಸುವ ಕುರಿತು ಯಾವುದೇ ಕ್ರಮಗಳನ್ನು ಪ್ರಸ್ತಾಪಿಸಿದ ಬಗ್ಗೆ ಸರ್ಕಾರ ಏನೂ ಹೇಳಿಲ್ಲ’ ಎಂದು ದೂರಿದ್ದಾರೆ.

‘ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ 11 ಜಿಲ್ಲೆಗಳ ಸಚಿವರು, ಶಾಸಕರ ಸಭೆಯಲ್ಲಿಯೂ ಇಂಥದ್ದೇ ಸಲಹೆಗಳು ವ್ಯಕ್ತವಾಗಿದ್ದವು.

ADVERTISEMENT

ದಶಕಗಳಿಂದ ನಡೆಯುತ್ತಿರುವ ಪಶ್ಚಿಮ ಘಟ್ಟ ಉಳಿಸಿ ಆಂದೋಲನದ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳಿಗೆ ಅರಿವಿಲ್ಲ. ಘಟ್ಟದ ಜನರಿಂದಲೇ ಆರಿಸಿ ಹೋದ ಈ ಜನಪ್ರತಿನಿಧಿಗಳು ಯಾರ ಹಿತಾಸಕ್ತಿ ಪ್ರತಿನಿಧಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

‘ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಎಲ್ಲಾ ಬಗೆಯ ಗಣಿಗಾರಿಕೆಗಳನ್ನು ತಕ್ಷಣ ನಿಷೇಧಿಸಬೇಕು ಮತ್ತು ಮರಗಳನ್ನು ಕಡಿದು ರಸ್ತೆ ಅಗಲ  ಮಾಡುತ್ತಿರುವುದನ್ನು ನಿಲ್ಲಿಸಬೇಕು’ ಎಂದು ಸಂಘಟನೆಯ ಪರವಾಗಿ, ದಿಲೀಪ್ ಕಾಮತ್, ಆರ್.ಪಿ. ವೆಂಕಟೇಶ್ ಮೂರ್ತಿ, ಶಾರದಾ ಗೋಪಾಲ್, ನಿತಿನ್ ಧೋಂಡ್, ನೈಲಾ ಕೊಯ್ಹಿಲೋ, ಪರಶುರಾಮೇಗೌಡ, ಮಮತಾ ರೈ, ಆಂಜನೇಯ ರೆಡ್ಡಿ, ಆರ್.ಶೋಭಾ ಭಟ್, ಪಾರ್ವತಿ ಶ್ರೀರಾಮ್, ಮಹೇಶ್ ಬಸಾಪುರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.