ಬಸವಕಲ್ಯಾಣ: ತಾಲ್ಲೂಕು ಮಾಜಿ ಸೈನಿಕರ ಸಂಘದಿಂದ ಭಾರತೀಯ ಭೂಸೇನೆಯ 75ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಸೈನಿಕ ಶಿಸ್ತಿನಲ್ಲಿದ್ದ ಈ ಮೆರವಣಿಗೆ ಯುವ ಸಮುದಾಯಕ್ಕೆ ಪ್ರೇರಣೆ ನೀಡುವಂತಿತ್ತು.
ಮುಖ್ಯರಸ್ತೆಯ ಮೂಲಕ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಯಿತು. ಎಲ್ಲ ಮಾಜಿ ಸೈನಿಕರು ಒಂದೇ ರೀತಿಯ ಉಡುಪಿನಲ್ಲಿದ್ದರು. ಅನೇಕರು ಎದೆಯ ಭಾಗದಲ್ಲಿ ತಮಗೆ ದೊರೆತ ನಾಣ್ಯದ ಆಕಾರದ ಹತ್ತಾರು ಪದಕಗಳ ಗುಚ್ಛ ಧರಿಸಿಕೊಂಡಿದ್ದು ಗಮನ ಸೆಳೆಯಿತು.
ಭಾರತ ಮಾತೆಯ ದೊಡ್ಡ ಭಾವಚಿತ್ರದೊಂದಿಗೆ ಸಾಗಿದ ಕಾರ್ಗಿಲ್ ಯುದ್ಧದ ಆಪರೇಷನ್ ವಿಜಯದ ಸ್ತಬ್ಧಚಿತ್ರ ಆಕರ್ಷಕವಾಗಿತ್ತು. ಇನ್ನೊಂದು ವಾಹನಕ್ಕೆ ಈ ಯುದ್ಧದಲ್ಲಿ ಹುತಾತ್ಮರಾದವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಯುವಕ, ಯುವತಿಯರು ಸೈನಿಕರಂತೆ ವೇಷ ಧರಿಸಿ ಕೈಯಲ್ಲಿ ಬಂದೂಕುಗಳನ್ನು ಹಿಡಿದುಕೊಂಡು ತೆರೆದ ವಾಹನಗಳಲ್ಲಿ ಕುಳಿತಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ತಂಡದವರು, ಎನ್.ಸಿ.ಸಿ. ಕೆಡೆಟ್ಗಳು, ಅಕ್ಕ ಪಡೆಯವರು ಮತ್ತು ಪೊಲೀಸರು ಸಹ ಮೆರವಣಿಗೆಯೊಂದಿಗೆ ಸಾಗಿದರು. ಅನೇಕರು ಕೈಗಳಲ್ಲಿ ರಾಷ್ಟ್ರಧ್ವಜಗಳನ್ನು ಹಿಡಿದುಕೊಂಡಿದ್ದರು. ದಾರಿಯುದ್ದಕ್ಕೂ ಜೈಘೋಷ ಕೂಗಲಾಯಿತು.
ಸಂಘದ ಅಧ್ಯಕ್ಷ ಬಾಬು ಗೋರಟೆ, ಉಪಾಧ್ಯಕ್ಷ ಮಲ್ಲಪ್ಪ ಬಾಗೇವಾಡಿ, ಮಾಜಿ ಸೈನಿಕರಾದ ಸಿದ್ರಾಮ ಬೇಲೂರೆ, ರಾಜಕುಮಾರ ಇರ್ಲೆ, ಪ್ರಕಾಶ ನೇತೆ, ಓಂಕಾರ ಬಿರಾದಾರ, ಚಂದ್ರಕಾಂತ ಮಾಳಿ, ಬಸವರಾಜ ಬಿರಾದಾರ, ಮಲ್ಲಪ್ಪ ಅತ್ಲಾಪುರೆ, ರಾಮಲಿಂಗ ಜೋಕಾರೆ, ಹಣಮಂತ ಇರ್ಲೆ, ರಮೇಶ ಪಾಟೀಲ, ಪ್ರಕಾಶ ಸೋನಾರ, ರಾಮಚಂದ್ರ ಬಸಯ್ಯಸ್ವಾಮಿ, ಶಂಕರ ಹಣಕುಣೆ ಮತ್ತಿತರರು ಪಾಲ್ಗೊಂಡಿದ್ದರು.
ದೇಶ ಸುರಕ್ಷಿತ: ನಂತರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಶರಣು ಸಲಗರ ಮಾತನಾಡಿ, ‘ದೇಶದ ಸುರಕ್ಷತೆಯಲ್ಲಿ ಸೈನಿಕರ ಪಾತ್ರ ಪ್ರಮುಖವಾದದ್ದು’ ಎಂದರು.
ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮುಖಂಡರಾದ ಎಂ.ಜಿ. ಮುಳೆ, ಧನರಾಜ ತಾಳಂಪಳ್ಳಿ, ಸಾಗರ ಖಂಡ್ರೆ ಭಾಲ್ಕಿ, ಅರ್ಪಿತಾ, ನಿವೃತ್ತ ಸೈನಿಕರಾದ ಬಾಬು, ವೆಂಕಟರೆಡ್ಡಿ, ಶರಣ ಸಿಕೇನಪುರ, ಸೂರ್ಯಕಾಂತ ಮೇತ್ರೆ, ಕೃಷ್ಣಾ, ಶಿಕ್ಷಕ ರಮೇಶ ರಾಜೋಳೆ ಮಾತನಾಡಿದರು.
ತಹಶೀಲ್ದಾರ್ ಶಿವಾನಂದ ಮೇತ್ರೆ, ಪ್ರಮುಖರಾದ ಮಾಲಾ ನಾರಾಯಣರಾವ್, ಅರ್ಜುನ ಕನಕ, ರವಿ ಚಂದನಕೆರೆ, ಸಬ್ ಇನ್ಸ್ಪೆಕ್ಟರ್ ನಂದಕುಮಾರ ಮುಳೆ, ವೀರಾರೆಡ್ಡಿ ಕಿಟ್ಟಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.