ಬೀದರ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ (ಎಬಿವಿಪಿ) ಆಯೋಜಿಸಿರುವ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ಶಿಬಿರದ ಭಿತ್ತಿಪತ್ರ ಬಿಡುಗಡೆ ನಗರದಲ್ಲಿ ನಡೆಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸದಾಶಿವ ಬಡಿಗೇರ ಭಿತ್ತಿಪತ್ರ ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸಮಾಜಸೇವೆಯ ಮನೋಭಾವ ಬೆಳೆಸುವ ಸ್ವಯಂ ಸೇವಕರ ದಿಟ್ಟ ನಿಲುವು ನೋಡಿ ಸಂತಸವಾಗುತ್ತದೆ. ಎಬಿವಿಪಿಯಂತಯ ಸ್ವಯಂ ಸೇವಕರ ಕೆಲಸ ದೊಡ್ಡದು. ರೈತ ಸೈನಿಕ ಮತ್ತು ವಿದ್ಯಾರ್ಥಿಗಳು ದೇಶದ ಶಕ್ತಿ. ನಮ್ಮ ದೇಶಕ್ಕೆ ಇಂತಹ ಸಂಘಟನೆಗಳ ಅಗತ್ಯವಿದೆ ಎಂದು ಹೇಳಿದರು.
ಎಬಿವಿಪಿ ವಿದ್ಯಾರ್ಥಿಗಳ ಧ್ವನಿಯಾಗಿ ಸೇವೆ ಸಲ್ಲಿಸುತ್ತಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ನೀಡುತ್ತಿರುವುದು ಶ್ಲಾಘನಾರ್ಹ ಕೆಲಸ. ಮಾರ್ಚ್ 6 ರಿಂದ ಪ್ರವೇಶ ಪ್ರಾರಂಭವಾಗಿದ್ದು, ಮಾರ್ಚ್ 26ರಂದು ಸಿಇಟಿ, ನೀಟ್ ತರಬೇತಿಗಳು ನಡೆಯಲಿವೆ. ಇದಕ್ಕಾಗಿ ಯಾವುದೇ ರೀತಿ ಶುಲ್ಕ ಇರುವುದಿಲ್ಲ. ಎಲ್ಲಾ ವಿಷಯಗಳ ನೋಟ್ಸ್ ಮುದ್ರಣಕ್ಕಾಗಿ ₹1 ಸಾವಿರ ವಿದ್ಯಾರ್ಥಿಗಳು ನೀಡಬೇಕಿದೆ ಎಂದರು.
ಔರಾದ್ (ಬಿ) ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರವೀಂದ್ರ ಮಾತನಾಡಿ, ಸಿಇಟಿ, ನೀಟ್ ಗಾಗಿ ಲಕ್ಷಾಂತರ ರೂಪಾಯಿ ಶುಲ್ಕವನ್ನು ಭರಿಸಬೇಕಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಶಿಬಿರ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಬಿವಿಪಿ ಸ೦ಘಟನಾ ಕಾರ್ಯದರ್ಶಿ ಹೇಮಂತ ಮಾತನಾಡಿ, ಬೀದರ್ ನಗರದ ಸನ್ ಸಾಫ್ಟ್ ಪದವಿ ಕಾಲೇಜಿನಲ್ಲಿ ಒಂದು ತಿಂಗಳು ಉಚಿತ ತರಬೇತಿ ನಡೆಯುತ್ತಿದೆ. ಕಳೆದ 10 ವರ್ಷಗಳಿಂದ ತರಬೇತಿ ನಡೆಸಲಗುತ್ತಿದ್ದು, ಸುಮಾರು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆದಿದ್ದಾರೆ. ಕಳೆದ ವರ್ಷ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಇಲ್ಲಿಯವರೇ ನೂರಾರು ಜನ ತರಬೇತಿಯಿಂದ ಸಿಇಟಿ, ನೀಟ್ ಸೀಟುಗಳು ಪಡೆದಿದ್ದಾರೆ ಎಂದರು.
ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೇ ಹಾಜರಿದ್ದರು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 7624906563, 7411312269, 741134149 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.