ಬೀದರ್: ‘ಫೋನ್ ಪೇ ವೇರಿಫೈ’ ಹೆಸರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 79 ಜನರಿಂದ ₹40 ಲಕ್ಷ ವಂಚಿಸಿದ ಆರೋಪಿಯನ್ನು ಬೀದರ್ ಜಿಲ್ಲಾ ಪೊಲೀಸರು ಬಂಧಿಸಿ, ಆತನ ಬಳಿಯಿಂದ ಆರು ಮೊಬೈಲ್ಗಳು, 45 ಸಿಮ್ ಕಾರ್ಡ್ಗಳನ್ನು ಬುಧವಾರ ಜಪ್ತಿ ಮಾಡಿಕೊಂಡಿದ್ದಾರೆ.
ನಗರದ ಕೆಎಚ್ಬಿ ಕಾಲೊನಿ ನಿವಾಸಿ ಶಿವಪ್ರಸಾದ ಶಂಕ್ರೆಪ್ಪ ಮಾಡಗಿ ಬಂಧಿತ ಆರೋಪಿ. ಜನರಿಂದ ವಂಚಿಸಿದ ₹40 ಲಕ್ಷವನ್ನು ಐಷಾರಾಮಿ ಜೀವನ ನಡೆಸಲು ಖರ್ಚು ಮಾಡಿದ್ದಾನೆ. ಪೊಲೀಸರು ₹12 ಸಾವಿರವಷ್ಟೇ ಆತನ ಬಳಿಯಿಂದ ಜಪ್ತಿ ಮಾಡಿದ್ದಾರೆ.
‘ವಿವಿಧ ಇಲಾಖೆಗಳ ಸರ್ಕಾರಿ ನೌಕರರ ದತ್ತಾಂಶಗಳನ್ನು ಗೂಗಲ್ನಲ್ಲಿ ಸರ್ಚ್ ಮಾಡಿ, ಅವರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ, ಅವರಿಗೆ ಕರೆ ಮಾಡಿ ವಂಚಿಸುತ್ತಿದ್ದ. ತಾನು ಎಸ್ಬಿಐ ಮುಖ್ಯ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿ, ಫೋನ್ ಪೇನಲ್ಲಿ ಯುಪಿಐ ಐ.ಡಿ ವೇರಿಫೈ ಮಾಡಿ, ಹಣದ ಲಿಮಿಟ್ ಸೆಟ್ ಮಾಡಲು ಹೇಳುತ್ತಿದ್ದ. ಅವರ ಮೂಲಕವೇ ಎಲ್ಲ ಮಾಡಿಸಿ, ಚಿನ್ನಾಭರಣ ಹಾಗೂ ಮೊಬೈಲ್ ಮಳಿಗೆಗಳ ಯುಪಿಐಗೆ ಹಣ ವರ್ಗಾಯಿಸಿ, ಸ್ಕ್ರೀನ್ ಶಾಟ್ ತರಿಸಿಕೊಳ್ಳುತ್ತಿದ್ದ. ಬಳಿಕ ಅದನ್ನು ಮಳಿಗೆಯವರಿಗೆ ತೋರಿಸಿ ಚಿನ್ನದ ನಾಣ್ಯ ಹಾಗೂ ಮೊಬೈಲ್ಗಳನ್ನು ಖರೀದಿಸಿ, ಒಎಲ್ಎಕ್ಸ್ನಲ್ಲಿ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.
‘ಮೇ 29ರಂದು ಬಸವಕಲ್ಯಾಣ ತಾಲ್ಲೂಕಿನ ಯಳವಂತಗಿ ಗ್ರಾಮದ ಸಂಗಪ್ಪ ಮಾದಪ್ಪ ಕಲ್ಯಾಣ ಅವರಿಗೆ ₹75 ಸಾವಿರ ವಂಚಿಸಿದ್ದ. ಸಂಗಪ್ಪ ಅವರು ಈ ಕುರಿತು ಠಾಣೆಗೆ ದೂರು ನೀಡಿದ್ದರು. ಮುಡಬಿ ಪೊಲೀಸ್ ಠಾಣೆಯಲ್ಲಿ ಐ.ಟಿ ಕಾಯ್ದೆ ಅಡಿ ವಂಚನೆ ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಸೈಬರ್ ಪೊಲೀಸರ ನೆರವಿನಿಂದ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಆರೋಪಿ ನಗರದ ಕರ್ನಾಟಕ ಕಾಲೇಜಿನಲ್ಲಿ ಬಿಸಿಎ ಪದವಿ ಪೂರೈಸಿದ್ದು, ಹಿಂದೆ ಬೆಂಗಳೂರಿನಲ್ಲಿ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಕೂಡ ₹4.50 ಲಕ್ಷ ಮೌಲ್ಯದ 150 ಮೊಬೈಲ್ಗಳನ್ನು ವಂಚಿಸಿ ಬಂಧನಕ್ಕೊಳಗಾಗಿದ್ದ. ಆನಂತರ ಬೆಂಗಳೂರಿನಲ್ಲಿ ಡಾನ್ಸ್ ಬಾರ್ಗಳಿಗೆ ಯುವತಿಯರನ್ನು ಕರೆದೊಯ್ಯುವ ಕೆಲಸ ಮಾಡುತ್ತಿದ್ದ. ಡಾನ್ಸ್ ಬಾರ್ಗಳು ಬಂದ್ ಆದ ನಂತರ ಆನ್ಲೈನ್ನಲ್ಲಿ ಜನರನ್ನು ವಂಚಿಸಲು ಆರಂಭಿಸಿದ’ ಎಂದು ತಿಳಿಸಿದ್ದಾರೆ.
79 ಜನರಿಗೆ ₹40 ಲಕ್ಷ ವಂಚನೆ ಈ ಹಿಂದೆ ಕಾಲ್ ಸೆಂಟರ್, ಡಾನ್ಸ್ ಬಾರ್ನಲ್ಲಿ ಕೆಲಸ ಐ.ಟಿ ಕಾಯ್ದೆಯಡಿ ವಂಚನೆ ಪ್ರಕರಣ ದಾಖಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.