ಬೀದರ್: ಚುನಾವಣಾ ಪ್ರಚಾರದ ಕಾವು ಸಂಪೂರ್ಣ ಇಳಿದಿದೆ. ಆದರೆ, ಪ್ರಖರವಾದ ಬಿಸಿಲು, ಉಷ್ಣ ಅಲೆಗಳು ಬೀಸುವುದು ಕಮ್ಮಿಯಾಗಿಲ್ಲ. ಇದರ ನಡುವೆ ಮತದಾನಕ್ಕೆ ಬೀದರ್ ಲೋಕಸಭಾ ಕ್ಷೇತ್ರದ ಮತಗಟ್ಟೆಗಳು ಸಂಪೂರ್ಣ ಸಿದ್ಧಗೊಂಡಿವೆ.
ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ 42ರಿಂದ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ತೀವ್ರ ತೆರನಾದ ಉಷ್ಣ ಅಲೆಗಳು ಬೀಸುತ್ತಿವೆ. ಇದರಿಂದ ಹೆದರಿಕೊಂಡು ಜನ ಹೊರಗೆ ಓಡಾಡುವುದನ್ನೇ ಕಡಿಮೆ ಮಾಡಿದ್ದಾರೆ. ಅನಿವಾರ್ಯ ಇದ್ದರಷ್ಟೇ ಮನೆಯ ಹೊರಗಡೆ ಹೋಗುತ್ತಿದ್ದಾರೆ. ಇನ್ನು, ‘ಕೆಲವು ದಿನಗಳವರೆಗೆ ಉರಿ ಬಿಸಿಲು, ಉಷ್ಣ ಅಲೆಗಳು ಜಿಲ್ಲೆಯಾದ್ಯಂತ ಮುಂದುವರಿಯಲಿವೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳವಾರ (ಮೇ 7) ಜಿಲ್ಲೆಯ 1,528 ಮತಗಟ್ಟೆಗಳಲ್ಲಿ ಮತದಾನಕ್ಕೆ ಜಿಲ್ಲಾ ಚುನಾವಣಾ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಮತಗಟ್ಟೆಗಳಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ಒಆರ್ಎಸ್, ಫ್ಯಾನ್, ವ್ಹೀಲ್ ಚೇರ್, ಶೌಚಾಲಯ ಸೇರಿದಂತೆ ಇತರೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಶೇ 80ರಷ್ಟು ಮತದಾನದ ಗುರಿಯನ್ನು ಜಿಲ್ಲಾ ಸ್ವೀಪ್ ಸಮಿತಿ ಇಟ್ಟುಕೊಂಡಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ ಸಾಕಷ್ಟು ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಆದರೆ, ಕೆಂಡದಂತಹ ಬಿಸಿಲಿನಿಂದ ಮತದಾನ ಹೇಗಾಗುತ್ತೋ? ಜನ ಮನೆಗಳಿಂದ ಹೊರಗೆ ಬಂದು ಯಾವ ರೀತಿ ಮತ ಚಲಾಯಿಸುತ್ತಾರೆ ಎಂಬ ಸಣ್ಣ ಅನುಮಾನ ಚುನಾವಣಾ ಆಯೋಗದ ಅಧಿಕಾರಿಗಳನ್ನು ಕಾಡುತ್ತಿದೆ.
‘ಮಂಗಳವಾರ (ಮೇ 7) ಸಹ ಉಷ್ಟ ಅಲೆಗಳು ಬೀಸುವುದು ಮುಂದುವರಿಯಲಿವೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಮತದಾನದ ಮೇಲೆ ಪ್ರಭಾವ ಬೀರುತ್ತೋ ಎಂಬ ಅನುಮಾನ ಕಾಡುತ್ತಿದೆ. ಆದರೆ, ಮತದಾರರು ತಮ್ಮ ಹಕ್ಕು ಚಲಾಯಿಸಬೇಕು. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ತೆರಳಿ ಮತ ಚಲಾಯಿಸಬೇಕು. ಎಲ್ಲ ಮತಗಟ್ಟೆಗಳಲ್ಲಿ ಶಾಮಿಯಾನ ಹಾಕಿ ನೆರಳಿಗೆ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು ಸಹ ಇಡಲಾಗಿದೆ. ಇಷ್ಟೇ ಅಲ್ಲ, ಚುನಾವಣಾ ಸಿಬ್ಬಂದಿಗೆ ಒಆರ್ಎಸ್ ಪ್ಯಾಕೆಟ್ಗಳನ್ನು ನೀಡಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.
‘ಬಿಸಿಲ ಝಳ ಹೆಚ್ಚಾಗಿದೆ. ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡವರು ಕಡ್ಡಾಯವಾಗಿ ಒಆರ್ಎಸ್ ಜೊತೆಗೆ ಇಟ್ಟುಕೊಳ್ಳಬೇಕು. ಕಾಯಿಲೆ ಇರುವವರು ಗುಳಿಗೆಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಿ. ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಿ, ಎಲ್ಲರೂ ಸೇರಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸೋಣ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡವರಿಗೆ ಧೈರ್ಯ ತುಂಬುವ ಕೆಲಸವನ್ನು ನಗರದ ಬಿ.ವಿ.ಬಿ ಕಾಲೇಜಿನ ಮಸ್ಟರಿಂಗ್ ಕೇಂದ್ರದಲ್ಲಿ ಮಾಡಿದರು.
ಚುನಾವಣಾ ಆಯೋಗದ ಅಧಿಕಾರಿಗಳಷ್ಟೇ ಅಲ್ಲ, ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೂ ಇದೇ ವಿಷಯ ಕಾಡುತ್ತಿದೆ. ಕ್ಷೇತ್ರದಾದ್ಯಂತ ಸ್ಟಾರ್ ಪ್ರಚಾರಕರು, ಕಾರ್ಯಕರ್ತರು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಆದರೆ, ಬಿಸಿಲಿಗೆ ಜನ ಹೊರಗೆ ಬಂದು ಮತ ಹಾಕುತ್ತಾರೋ ಅಥವಾ ಇಲ್ಲವೋ ಎಂಬ ಚಿಂತೆ ಕಾಡುತ್ತಿದೆ. ಒಂದುವೇಳೆ ಮತದಾನದ ಪ್ರಮಾಣ ಕಡಿಮೆಯಾದರೆ ಯಾರಿಗೆ ಲಾಭ ಎಂಬ ಲೆಕ್ಕಾಚಾರಗಳು ಶುರುವಾಗಿವೆ.
ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೋಮವಾರ ನಗರದ ಬಿ.ವಿ.ಬಿ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಬಂದು ಚುನಾವಣಾ ಸಾಮಗ್ರಿಗಳೊಂದಿಗೆ ನಿಗದಿತ ಮತಗಟ್ಟೆಗಳಿಗೆ ತೆರಳಿದರು.
ಇವಿಎಂ, ವಿವಿಪ್ಯಾಟ್, ಕಂಟ್ರೋಲ್ ಯೂನಿಟ್, ಶಾಹಿ, ಒಆರ್ಎಸ್ ಪೊಟ್ಟಣ, ಮತದಾರರ ಪಟ್ಟಿಗಳೊಂದಿಗೆ ಬಸ್ಗಳ ಮೂಲಕ ಮತಗಟ್ಟೆಗಳಿಗೆ ತೆರಳಿದರು. ಇದಕ್ಕೂ ಮುನ್ನ ಸೆಕ್ಟರ್ವಾರು ಮತದಾನಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ವಿತರಿಸಲಾಯಿತು. ಸಿಬ್ಬಂದಿಗೆ ಅನ್ನ, ಸಾಂಬಾರ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಸಿಬ್ಬಂದಿ ಕುಳಿತುಕೊಳ್ಳಲು ಶಾಮಿಯಾನ ಹಾಕಲಾಗಿತ್ತು. ಬಿಸಿಲು, ಉಷ್ಣ ಅಲೆಗಳಿಂದ ಸಿಬ್ಬಂದಿ ಪರದಾಟ ನಡೆಸುವುದು ಕಂಡು ಬಂತು.
ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬೀದರ್ ಜಿಲ್ಲೆಯಲ್ಲಿ ಮಂಗಳವಾರ (ಮೇ 7) ಕೂಡ ಉಷ್ಣ ಅಲೆಗಳು ಬೀಸಲಿದ್ದು ಇದರ ನಡುವೆ ಚುನಾವಣೆ ನಡೆಸಬೇಕಾದ ಸವಾಲಿದೆ– ಗೋವಿಂದ ರೆಡ್ಡಿ ಜಿಲ್ಲಾ ಚುನಾವಣಾಧಿಕಾರಿ
ಬಿಸಿಲು ಸಾಕಷ್ಟು ಹೆಚ್ಚಿದೆ. ಚುನಾವಣಾ ಸಿಬ್ಬಂದಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚಿಸಲಾಗಿದೆ– ಚನ್ನಬಸವಣ್ಣ ಎಸ್.ಎಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.