ಬೀದರ್: ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಗರದ ಚೆನ್ನಬಸಮ್ಮ ಕಾಲೇಜಿನಲ್ಲಿ 2024–25ನೇ ಸಾಲಿನಲ್ಲಿ ‘ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್’ (ಬಿಸಿಎ) ಪದವಿ ಕೋರ್ಸ್ ಆರಂಭಿಸಲು ‘ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಶನ್’ (ಎಐಸಿಟಿಇ) ಅನುಮೋದನೆ ನೀಡಿದೆ.
ಈ ಶೈಕ್ಷಣಿಕ ವರ್ಷದಿಂದ ಮೊದಲ ಬಾರಿಗೆ ಎಐಸಿಟಿಇ, ಶಿಕ್ಷಣ ಸಂಸ್ಥೆಗಳು ನೀಡುವ ಬಿಸಿಎ ಕೋರ್ಸ್ ತನ್ನ ವ್ಯಾಪ್ತಿಗೆ ತಂದಿದೆ. ಈ ಕೋರ್ಸ್ ನಡೆಸಲು ಎಐಸಿಟಿಇ ಅನುಮೋದನೆ ಪಡೆಯುವುದು ಕಡ್ಡಾಯಗೊಳಿಸಿದೆ.
ಬಿಸಿಎ ಕೋರ್ಸ್ ಎಐಸಿಟಿಇ ವ್ಯಾಪ್ತಿಗೆ ತಂದಿರುವುದರಿಂದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ, ಇಂಟರ್ನ್ಶಿಪ್, ಉದ್ಯೋಗಕ್ಕಾಗಿ ಸಹಾಯ, ಫೆಲೋಶಿಪ್ ಮತ್ತು ಇತರೆ ಪ್ರಯೋಜನಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಚೆನ್ನಬಸಮ್ಮ ಕಾಲೇಜಿನ ಪ್ರಾಚಾರ್ಯ ಸತೀಶ್ ಪ್ರತಾಪೂರ ತಿಳಿಸಿದ್ದಾರೆ.
ಬಿಸಿಎ ಕೋರ್ಸ್ ಆರಂಭಿಸಲು ಅನುಮತಿ ಸಿಕ್ಕಿರುವುದಕ್ಕೆ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ದಾಕ್ಷಾಯಿಣಿ ಅವ್ವಾಜಿ, ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪಾಜಿ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.