ADVERTISEMENT

ಬಸವಕಲ್ಯಾಣ: ಶರಣ ವಿಜಯೋತ್ಸವಕ್ಕೆ ವೇದಿಕೆ ಸಜ್ಜು

ಮಾಣಿಕ ಆರ್ ಭುರೆ
Published 3 ಅಕ್ಟೋಬರ್ 2024, 4:31 IST
Last Updated 3 ಅಕ್ಟೋಬರ್ 2024, 4:31 IST
ಬಸವಕಲ್ಯಾಣದ ಶರಣ ಹರಳಯ್ಯನವರ ಗವಿ ಎದುರು ಶರಣ ವಿಜಯೋತ್ಸವಕ್ಕಾಗಿ ಬುಧವಾರ ವೇದಿಕೆ ಮತ್ತು ಮಂಟಪ ಸಿದ್ಧಗೊಳಿಸಲಾಯಿತು
ಬಸವಕಲ್ಯಾಣದ ಶರಣ ಹರಳಯ್ಯನವರ ಗವಿ ಎದುರು ಶರಣ ವಿಜಯೋತ್ಸವಕ್ಕಾಗಿ ಬುಧವಾರ ವೇದಿಕೆ ಮತ್ತು ಮಂಟಪ ಸಿದ್ಧಗೊಳಿಸಲಾಯಿತು   

ಬಸವಕಲ್ಯಾಣ: ಸರ್ವ ಸಮಾನತೆ, ಸೌಹಾರ್ದಕ್ಕಾಗಿ ನಡೆದಿರುವುದು 12 ನೇ ಶತಮಾನದ ಕಲ್ಯಾಣಕ್ರಾಂತಿ. ಇಂಥ ಅಭೂತಪೂರ್ವ ಘಟನೆ ಮೇಲೆ ಬೆಳಕು ಚೆಲ್ಲುವ ಸದುದ್ದೇಶದಿಂದ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದಿಂದ ನಗರದಲ್ಲಿ ದಸರೆಯಲ್ಲಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಕ್ಟೋಬರ್ 3ರಿಂದ ಅ.12ರವರೆಗೆ 10 ದಿನಗಳವರೆಗೆ ನಿರಂತರವಾಗಿ ವಿವಿಧ ಚಟುವಟಿಕೆಗಳು ನಡೆಯಲಿವೆ.

ಗುರು ಬಸವಣ್ಣನವರ ನೇತೃತ್ವದಲ್ಲಿ ಅಂತರ್ಜಾತಿ ವಿವಾಹ ನೆರವೇರಿದ ಕಾರಣವೇ ಸಮಾಜದಲ್ಲಿ ಅಲ್ಲೋಲಕಲ್ಲೋಲ ಆಯಿತು. ಶರಣ ಸಮಗಾರ ಹರಳಯ್ಯ ಅವರನ್ನು ಒಳಗೊಂಡು ಕೆಲ ಶರಣರನ್ನು ಆನೆ ಕಾಲಿಗೆ ಕಟ್ಟಿ ಬೀದಿಯಲ್ಲಿ ಎಳೆದು ‘ಎಳೆಹೂಟೆ ಶಿಕ್ಷೆ’ ವಿಧಿಸಲಾಯಿತು. ಹರಳಯ್ಯನವರನ್ನು ಈ ಕ್ರಾಂತಿಯ ಕಾರಣಿಕ ಪುರುಷ ಎನ್ನಲಾಗುತ್ತದೆ. ಆದ್ದರಿಂದ ಇಲ್ಲಿನ ಕಾರ್ಯಕ್ರಮದ ಕೊನೆಯಲ್ಲಿ ಎಳೆಹೂಟೆ ಶಿಕ್ಷೆಯ ಸಾಕ್ಷ ಚಿತ್ರಗಳೊಂದಿಗೆ ಮೆರವಣಿಗೆ ಆಯೋಜಿಸುವ ರೂಢಿಯಿದೆ.

ಹರಳಯ್ಯನವರಿಗೆ ಸಂಬಂಧಿಸಿದ ಸ್ಮಾರಕವಾದ ಹರಳಯ್ಯನವರ ಗವಿ ಆವರಣದಲ್ಲಿಯೇ ‘ಶರಣ ವಿಜಯೋತ್ಸವ ಮತ್ತು ನಾಡಹಬ್ಬದ’ದ ರೂಪದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.

ADVERTISEMENT

ಅಕ್ಕ ಗಂಗಾಂಬಿಕಾ ಅವರು ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠ ಸ್ಥಾಪಿಸಿದಾಗಿನಿಂದ ಪ್ರತಿ ವರ್ಷವೂ ಹೊಸ ರೀತಿ, ಹೊಸ ಉತ್ಸಾಹ, ಹುಮ್ಮಸ್ಸಿನಿಂದ ಸಮಾರಂಭ ಜರುಗುತ್ತಿದೆ. ನಾಡಿನ ವಿದ್ವಾಂಸರಿಂದ ಪ್ರತಿದಿನ ಸಂಜೆ ವಿಶೇಷ ಉಪನ್ಯಾಸ, ಸಂವಾದ, ಚರ್ಚೆ ಏರ್ಪಡಿಸಲಾಗುತ್ತದೆ. ವಚನ ಗಾಯನ, ವಚನ ನೃತ್ಯ, ಶರಣರ ಜೀವನಕ್ಕೆ ಸಂಬಂಧಿಸಿದ ರೂಪಕ, ಕಿರು ನಾಟಕ, ಭಜನೆ, ಕೋಲಾಟವೂ ಇರುತ್ತದೆ. ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ‘ಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿ’ಯನ್ನೂ ನೀಡಲಾಗುತ್ತದೆ.

ಕಲ್ಯಾಣಕ್ರಾಂತಿಯಲ್ಲಿ ಹುತಾತ್ಮರಾದ ಶರಣರ ದೊಡ್ಡ ಸ್ಮಾರಕ ಇಲ್ಲಿ ನಿರ್ಮಿಸುವುದಕ್ಕಾಗಿ ಅನೇಕ ವರ್ಷಗಳಿಂದ ಪ್ರಯತ್ನ ಸಾಗಿದೆ. ಮಾಜಿ ಸಚಿವ ಭೀಮಣ್ಣ ಖಂಡ್ರೆ ನೇತೃತ್ವದಲ್ಲಿ 12 ವರ್ಷಗಳ ಹಿಂದೆ ರಾಜ್ಯಮಟ್ಟದ ಹುತಾತ್ಮ ದಿನಾಚರಣೆ ಇಲ್ಲಿ ನಡೆದಿತ್ತು. ಆಗ ಬೃಹತ್ ಪ್ರಮಾಣದ ಸ್ಮಾರಕ ಕಟ್ಟಬೇಕು ಎಂದು ಖಂಡ್ರೆಯವರು ಆಶಯ ವ್ಯಕ್ತಪಡಿಸಿದ್ದರು. ಅದು ಆದಿದ್ದರೂ, ಅಕ್ಕ ಗಂಗಾಂಬಿಕಾ ಅವರು ಮಾತ್ರ ಹರಳಯ್ಯ ಗವಿಯಲ್ಲಿ ಮಾಸಿಕ ಮತ್ತು ವಾರ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರಂತರವಾಗಿ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಕ್ರಾಂತಿಯಲ್ಲಿ ಅನೇಕ ಶರಣರ ಬಲಿದಾನ ಆಗಿದ್ದರೂ ಅವರು ಜಯಶಾಲಿಯಾದರು. ಆದ್ದರಿಂದ ಕಾರ್ಯಕ್ರಮಕ್ಕೆ ಶರಣ ವಿಜಯೋತ್ಸವ ಎಂದು ಹೆಸರಿಡಲಾಗಿದೆ
ಅಕ್ಕ ಗಂಗಾಂಬಿಕಾ ಅಧ್ಯಕ್ಷೆ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠ
ಹರಳಯ್ಯನವರ ಗವಿಯನ್ನು ನಿರಂತರ ಚಟುವಟಿಕೆಯ ಕೇಂದ್ರವಾಗಿಸಿರುವ ಅಕ್ಕ ಗಂಗಾಂಬಿಕಾ ಅವರು ಕಲ್ಯಾಣಕ್ರಾಂತಿಯನ್ನು ಹೆಜ್ಜೆಹೆಜ್ಜೆಗೂ ನೆನಪಿಸುತ್ತಿದ್ದಾರೆ
ರವಿ ಕೊಳಕೂರ ನಗರಸಭೆ ಮಾಜಿ ಸದಸ್ಯ
ಹರಳಯ್ಯನವರೇ ಕ್ರಾಂತಿಗೆ ಮೂಲ ಕಾರಣರು. ಅಕ್ಕ ಗಂಗಾಂಬಿಕಾ ಅವರು ಅವರ ಗವಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಈ ಶರಣರ ಕಾರ್ಯದ ಪ್ರಚಾರಗೈಯುತ್ತಿದ್ದಾರೆ
ಶಿವಕುಮಾರ ಬಿರಾದಾರ ಸಂಚಾಲಕ ಬಸವ ಯುವ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.