ಬೀದರ್: ‘ಕನ್ನಡ ನಾಡು-ನುಡಿಯ ಅಂತಃಕರಣದಿಂದ ಪ್ರೀತಿ, ಸ್ವಾಭಿಮಾನ ಹೊರಹೊಮ್ಮಬೇಕು’ ಎಂದು ಜಿಲ್ಲಾ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ಕನ್ನಡ ಸಂಘದಿಂದ ನಗರದ ಕುಂಬಾರವಾಡದ ಕರುನಾಡು ಸಾಂಸ್ಕೃತಿಕ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಪನ್ಯಾಸ ಮತ್ತು ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಕ್ಷರಸ್ಥರಾದ ನಾವು ಆಂಗ್ಲಭಾಷೆ ವ್ಯಾಮೋಹದಿಂದ ಹೊರಬರಬೇಕು ಎಂದರು.
ಮದುವೆ ಇನ್ನಿತರ ಕಾರ್ಯಕ್ರಮಗಳ ಆಮಂತ್ರಣ ಪತ್ರಗಳಲ್ಲಿ ಆಂಗ್ಲ ಪದಗಳು ಕಂಡು ಬರುತ್ತಲಿವೆ. ಕನ್ನಡದ ಅಂಕಿ ಸಂಖ್ಯೆಗಳು ಬಳಕೆಯಲ್ಲಿ ತರುತ್ತಿಲ್ಲ. ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆಗೆ ಕುತ್ತುಬರದಂತೆ, ಕನ್ನಡ ನಾಡು-ನುಡಿ ಸಂರಕ್ಷಣೆಗೆ ಶ್ರಮಿಸಬೇಕೆಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಶ್ರೀಕಾಂತ ಪಾಟೀಲ ಉದ್ಘಾಟಿಸಿ, ಜಿಲ್ಲೆಯಲ್ಲಿ ಕನ್ನಡ ಪರ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿರುವುದು ಸಂತಸದ ವಿಷಯ. ಪ್ರಸ್ತುತ ಆರೋಗ್ಯವಂತ ಸಮಾಜಕ್ಕೆ ಪೂರಕವಾದ ಸಾಹಿತ್ಯ ಕೃತಿಗಳು ಹೊರಬರಲಿ ಎಂದು ಆಶಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಸನ್ಮಾನ ಸ್ವೀಕರಿಸಿ, ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ಕನ್ನಡ ಸಂಘ-ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಯೋಗ ಶಿಕ್ಷಕ ಗುರುನಾಥ ಮೂಲಗೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಬಸವರಾಜ ಮಯೂರ, ಚಿತ್ರಕಲಾ ಶಿಕ್ಷಕ ಶ್ರೀಕಾಂತ ಬಿರಾದಾರ, ಕನ್ನಡ ಪ್ರಗತಿ ಸಂಘದ ಗೌರವ ಅಧ್ಯಕ್ಷ ರಮೇಶ ಮೂಲಗೆ, ಸಂಘದ ಅಧ್ಯಕ್ಷ ಉಮಾಕಾಂತ ಮೀಸೆ, ಸಂಘದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಅಲ್ಲೂರೆ, ವಿಜಯಕುಮಾರ ಎಕೇಳ್ಳೆ, ಶಂಭುಲಿಂಗ ವಾಲದೊಡ್ಡಿ, ರಮೇಶ ಬಿರಾದಾರ, ಸಂತೋಷ ಜೋಳದಾಬಕೆ, ರಾಮನಗೌಡ, ಮೀನಾಕ್ಷಿ ಪಾಟೀಲ, ಸವಿತಾ, ಲಕ್ಷ್ಮಿ ಹಾಜರಿದ್ದರು. ಕವಿಗಳು ಕವನ ವಾಚನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.