ಭಾಲ್ಕಿ: ತಾಲ್ಲೂಕಿನ ಕಲವಾಡಿ ಗ್ರಾಮದಲ್ಲಿ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರ ಅದ್ದೂರಿ ಮೆರವಣಿಗೆ ಬೆಳ್ಳಿ ರಥದಲ್ಲಿ ನಡೆಯಿತು.
ಲಕ್ಷ್ಮಿದೇವಿಯ 14ನೇ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮಕ್ಕೂ ಮೊದಲು ಆರಂಭಗೊಂಡ ಮೆರವಣಿಗೆ ಗ್ರಾಮದ ಮುಖ್ಯರಸ್ತೆಯಿಂದ ಲಕ್ಷ್ಮಿದೇವಿ ದೇವಸ್ಥಾನದವರೆಗೆ ಸಾಗಿತು. ಕುಂಭ–ಕಳಸ ಹೊತ್ತ ಮಹಿಳೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನ ಭಕ್ತರು ಡಿಜೆ ಸೌಂಡ್ನಲ್ಲಿ ಮೊಳಗಿದ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.
ಪ್ರವಚನದಲ್ಲಿ ಮಾತನಾಡಿದ ಬಸವಲಿಂಗ ಅವಧೂತರು, ‘ಮನೆಯಲ್ಲಿ ಎಲ್ಲರೂ ಪರಸ್ಪರ ಪ್ರೀತಿ, ಶಾಂತಿ, ಸಹಬಾಳ್ವೆಯಿಂದ ಬದುಕಿದರೆ ಮಾತ್ರ ಲಕ್ಷ್ಮಿದೇವಿ ನೆಲೆಸುತ್ತಾಳೆ. ಬಸವಾದಿ ಶರಣರು ನಡೆದಾಡಿದ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಧನ್ಯರು. ನಾಮಗಳು ಬೇರೆ, ಬೇರೆ ಇದ್ದರೂ, ದೇವರು ಒಬ್ಬನೇ ಇದ್ದಾನೆ. ದೇವರ ಕೃಪೆಗೆ ಪಾತ್ರರಾಗಲು ನಿತ್ಯ ಪೂಜೆ, ಧ್ಯಾನ ಮಾಡಬೇಕು. ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪ್ರಮುಖರಾದ ಪರಮೇಶ್ವರ ನೇಳಗೆ, ಗಜನಾನ ತೇಗಂಪೂರೆ, ಮಲ್ಲಪ್ಪ ವಡ್ಡೆ, ದೀಪಕ ಯರನಳ್ಳೆ, ಸಂಗಮೇಶ ತೇಗಂಪೂರೆ, ಸಚಿನ್ ತೇಗಂಪೂರೆ, ಯಲ್ಲಾಲಿಂಗ, ಸಂತೋಷ ನೇಳಗೆ, ಕೆ.ಡಿ.ಗಣೇಶ, ಶಶಿಧರ, ಸೀತಾ, ಸಿದ್ದೇಶ್ವರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.