ಬೀದರ್: ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ ಜಿಲ್ಲೆ ಒಂದು ಸ್ಥಾನ ಮೇಲಕ್ಕೇರಿದೆ.
ಈ ಸಲದ ಫಲಿತಾಂಶದಲ್ಲಿ ರಾಜ್ಯದಲ್ಲಿ ಬೀದರ್ ಜಿಲ್ಲೆ 33ನೇ ಸ್ಥಾನ ಪಡೆದಿದೆ. ಹೋದ ವರ್ಷಕ್ಕೆ ಹೋಲಿಸಿದರೆ ಒಂದು ಸ್ಥಾನ ಜಿಗಿದಿದೆ. ಪರೀಕ್ಷೆಗೆ ಒಟ್ಟು 28,168 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 16,168 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಗೆ ಒಟ್ಟು ಶೇ 57.52ರಷ್ಟು ಫಲಿತಾಂಶ ಬಂದಿದೆ.
ಬೀದರ್ ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಓದಿನಲ್ಲಿ ಹಿಂದಿರುವ ಮಕ್ಕಳ ಬಗ್ಗೆ ಗಮನ ಹರಿಸಿ, ಅವರಿಗೆ ಹೆಚ್ಚುವರಿ ತರಗತಿಗಳನ್ನು ನಡೆಸಿ, ತರಬೇತಿ ನೀಡಲಾಗಿತ್ತು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ‘ಕಲಿಕಾ ಆಸರೆ’ ಪುಸ್ತಕಗಳನ್ನು ಒದಗಿಸಲಾಗಿತ್ತು. ಜಿಲ್ಲಾಧಿಕಾರಿ ಕೂಡ ಎರಡ್ಮೂರು ಸಭೆಗಳನ್ನು ನಡೆಸಿ, ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ, ಒಟ್ಟಾರೆ ಫಲಿತಾಂಶ ಹೇಳಿಕೊಳ್ಳುವಂತಹ ರೀತಿಯಲ್ಲಿ ಬಂದಿಲ್ಲ.
‘ಶಿಕ್ಷಣ ಇಲಾಖೆಯು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗುತ್ತಿದೆ. ಪಿಯು ಫಲಿತಾಂಶದಲ್ಲಿ ಜಿಲ್ಲೆ ಸಾಕಷ್ಟು ಮೇಲೆ ಬಂದಿದೆ. ಆದರೆ, ಎಸ್ಸೆಸ್ಸೆಲ್ಸಿಯಲ್ಲಿ ಇದು ಕಾಣುತ್ತಿಲ್ಲ. ಪ್ರತಿ ವರ್ಷ ಪರೀಕ್ಷೆಗೆ ಕೆಲ ದಿನಗಳು ಇರುವಾಗ ವಿಶೇಷ ತರಬೇತಿ ಕೊಡುತ್ತಾರೆ. ಆರಂಭದಿಂದಲೂ ಸಂಪನ್ಮೂಲ ವ್ಯಕ್ತಿಗಳಿಂದ ಫಲಿತಾಂಶದಲ್ಲಿ ಹಿಂದೆ ಇರುವ ಶಾಲೆಗಳನ್ನು ಗುರುತಿಸಿ ಅಲ್ಲಿ ತರಗತಿಗಳನ್ನು ನಡೆಸಿದರೆ ಉತ್ತಮ’ ಎನ್ನುತ್ತಾರೆಯ ಹೆಸರು ಹೇಳಲಿಚ್ಛಿಸದ ನಿವೃತ್ತ ಶಿಕ್ಷಕರು ಹಾಗೂ ಶಾಲೆಗಳ ಮುಖ್ಯಶಿಕ್ಷಕರು.
9 ಶಾಲೆಗಳಿಗೆ ಶೂನ್ಯ ಫಲಿತಾಂಶ:
ಬೀದರ್ ಜಿಲ್ಲೆಯಲ್ಲಿ ಈ ಸಲ ಒಂಬತ್ತು ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಹುಮನಾಬಾದಿನ ಕಲ್ಪನಾ ಚಾವ್ಲಾ ಪ್ರೌಢಶಾಲೆ, ಹುಮನಾಬಾದಿನ ಡಾ.ಅಂಬೇಡ್ಕರ್ ಪ್ರೌಢಶಾಲೆ, ಹುಮನಾಬಾದ್ ತಾಲ್ಲೂಕಿನ ಮಾಣಿಕ್ ನಗರದ ಮಾಣಿಕ್ ಪ್ರಭು ಪ್ರೌಢಶಾಲೆ, ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೇಳ್ಳಿಯ ಪ್ರಶಾಂತಪ್ರಿಯ ಪ್ರೌಢಶಾಲೆ, ಬೀದರ್ನ ಚಿದ್ರಿ ರಸ್ತೆಯಲ್ಲಿರುವ ಮಾಣಿಕಪ್ಪ ಬಂಡೆಪ್ಪ ಕಾಶೆಂಪುರ್ ಶಾಲೆ, ಬೀದರ್ನ ಫೈಜಪುರದ ಗುಲ್ಶನ್ ಪ್ರೌಢಶಾಲೆ, ಭಾಲ್ಕಿಯ ಕುಮಾರ ಸ್ವಾಮೀಜಿ ಕೆ.ಎಂ.ಎಚ್. ಶಾಲೆ, ಭಾಲ್ಕಿ ತಾಲ್ಲೂಕಿನ ಏಣಕೂರಿನ ಶ್ರೀಮತಿ ಜಗದೇವಿ ತಾಯಿ ಪ್ರೌಢಶಾಲೆ, ಬಸವಕಲ್ಯಾಣ ತಾಲ್ಲೂಕಿನ ಬೇಲೂರಿನ ಆನಂದ ಪ್ರೌಢಶಾಲೆ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.