ADVERTISEMENT

ಭಾಲ್ಕಿ |ಮರಾಠಿಗರನ್ನು ಒಂದುಗೂಡಿಸುವುದು ನನ್ನ ಗುರಿ: ಮನೋಜ ದಾದಾ ಜರಾಂಗೆ

ಮರಾಠಾ ಜಾಗೃತಿ ಸಮಾವೇಶದಲ್ಲಿ ಜರಾಂಗೆ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 7:20 IST
Last Updated 11 ಏಪ್ರಿಲ್ 2024, 7:20 IST
ಚಿತ್ರ ಭಾಲ್ಕಿಯಲ್ಲಿ ಬುಧವಾರ ನಡೆದ ಮರಾಠಾ ಸಮುದಾಯದ ಬೃಹತ್ ಜಾಗೃತಿ ಸಮಾವೇಶದಲ್ಲಿ ಮರಾಠಾ ಸಮಾಜದ ಹೋರಾಟಗಾರ ಮನೋಜ ದಾದಾ ಜರಾಂಗೆ ಪಾಟೀಲ ಅವರನ್ನು ಸನ್ಮಾನಿಸಲಾಯಿತು
ಚಿತ್ರ ಭಾಲ್ಕಿಯಲ್ಲಿ ಬುಧವಾರ ನಡೆದ ಮರಾಠಾ ಸಮುದಾಯದ ಬೃಹತ್ ಜಾಗೃತಿ ಸಮಾವೇಶದಲ್ಲಿ ಮರಾಠಾ ಸಮಾಜದ ಹೋರಾಟಗಾರ ಮನೋಜ ದಾದಾ ಜರಾಂಗೆ ಪಾಟೀಲ ಅವರನ್ನು ಸನ್ಮಾನಿಸಲಾಯಿತು   

ಭಾಲ್ಕಿ: ಮರಾಠಿಗರನ್ನು ಒಂದುಗೂಡಿಸಿ ಮೀಸಲಾತಿ ದೊರೆಯುವಂತೆ ಮಾಡುವುದು ನನ್ನ ಗುರಿ ಆಗಿದೆ ಎಂದು ಹೋರಾಟಗಾರ ಮನೋಜ ದಾದಾ ಜರಾಂಗೆ ಪಾಟೀಲ ಹೇಳಿದರು.

ಇಲ್ಲಿಯ ಪ್ರಯಾಗ ಕಲ್ಯಾಣ ಮಂಟಪ ಸಮೀಪ ಬುಧವಾರ ನಡೆದ ಮರಾಠಾ ಸಮುದಾಯದ ಬೃಹತ್ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ ಸುಮಾರು 50 ಲಕ್ಷ ಮರಾಠಿಗರ ಹೋರಾಟಕ್ಕೆ ಧ್ವನಿಯಾಗುವೆ. ಹಲವು ವರ್ಷಗಳಿಂದ ಇಲ್ಲಿಯ ಮರಾಠಿಗರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ರಾಜಕೀಯ ಪಕ್ಷಗಳು ಮರಾಠಿಗರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಹೊರತು ಮರಾಠಿಗರ ಮೀಸಲಾತಿ ಸೇರಿ ವಿವಿಧ ಬೇಡಿಕೆ ಈಡೇರುತ್ತಿಲ್ಲ ದೂರಿದರು. ಅನ್ಯಾಯದ ವಿರುದ್ಧ ಹೋರಾಟ ನಡೆಸಲು ನಾನು ಸದಾ ಸಿದ್ಧನಿದ್ದೇನೆ. ರಾಜ್ಯದ ಎಲ್ಲ ಮರಾಠಿಗರು ಒಂದಾದರೇ ನಿಮ್ಮೆಲ್ಲರ ನ್ಯಾಯಯುತ ಹೋರಾಟಕ್ಕೆ ಧ್ವನಿಯಾಗುತ್ತೇನೆ. ಎಲ್ಲ ಮರಾಠಿಗರು ಸೇರಿ ರಾಜ್ಯದಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ ನಮ್ಮ ಧ್ವನಿಯನ್ನು ಆಳುವ ಸರ್ಕಾರಕ್ಕೆ ಮುಟ್ಟಿಸೋಣ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ ಮಾತನಾಡಿ, ಬೀದರ್ ನಲ್ಲಿ ಏ.12ರಂದು ನಡೆಯುವ ಸಭೆಯಲ್ಲಿ ಮರಾಠ ಸಮಾಜದ ಜನರನ್ನು ಸೇರಿಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳಲಾಗುತ್ತದೆ. ಮರಾಠ ಸಮಾಜ ಶಿಕ್ಷಣ, ಕೃಷಿ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ನಮ್ಮ ಸಮುದಾಯವನ್ನು ಎಲ್ಲರೂ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಮೀಸಲಾತಿ ಸೇರಿ ನ್ಯಾಯಯುತ ವಿವಿಧ ಬೇಡಿಕೆ ಈಡೇರುತ್ತಿಲ್ಲ. ಮರಾಠ ಸಮುದಾಯದ ಎಲ್ಲ ಜನರು ಒಂದಾಗಿ ಶಕ್ತಿ ಪ್ರದರ್ಶಿಸಬೇಕು ಎಂದು ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ಬೆಂಗಳೂರು ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ, ಶಿವಾಜಿ ಮಹಾರಾಜರ ಜೀವನ, ಚರಿತ್ರೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಅವರಲ್ಲಿನ ಸಾಹಸ, ಧೈರ್ಯ, ಶೌರ್ಯ, ದೇಶಪ್ರೇಮ, ದೇಶಭಕ್ತಿ, ಸಹೋದರತ್ವ ಪ್ರತಿಯೊಬ್ಬರೂ ಅನುಸರಿಸುವ ಮೂಲಕ ಅವರಿಗೆ ನಿಜವಾದ ಗೌರವ ಕೊಡಬೇಕು ಎಂದು ತಿಳಿಸಿದರು. ಪ್ರಮುಖರಾದ ಜನಾರ್ಧನ ಬಿರಾದಾರ, ನಂದುಕುಮಾರ ಸಾಳುಂಕೆ, ಅಶೋಕರಾವ್ ಸೋನಜಿ, ಡಾ.ದಿನಕರ ಮೋರೆ, ತುಕಾರಾಮ ಮೋರೆ ಸೇರಿದಂತೆ ಇತರರು ಇದ್ದರು.

ADVERTISEMENT
ಚಿತ್ರ ಭಾಲ್ಕಿಯಲ್ಲಿ ಬುಧವಾರ ನಡೆದ ಮರಾಠಾ ಸಮುದಾಯದ ಬೃಹತ್ ಜಾಗೃತಿ ಸಮಾವೇಶದಲ್ಲಿ ಮರಾಠಾ ಸಮಾಜದ ಹೋರಾಟಗಾರ ಮನೋಜ ದಾದಾ ಜರಾಂಗೆ ಪಾಟೀಲ ಮಾತನಾಡಿದರು
ಚಿತ್ರ ಸಭೆಯಲ್ಲಿ ಪಾಲ್ಗೊಂಡ ಜನರು ಮೊಬೈಲ್ ಟಾರ್ಚ್ ಬೆಳಗಿಸುವುದರ ಮೂಲಕ ಮರಾಠಿಗರ ಏಕತೆಯ ಶಕ್ತಿ ಪ್ರದರ್ಶಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.