ADVERTISEMENT

ತಹಶೀಲ್ದಾರ್‌ ಕಚೇರಿಯಲ್ಲಿ ಶಿರಸ್ತೇದಾರ್‌ಗೆ ಚಾಕು ಇರಿತ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:45 IST
Last Updated 11 ಜುಲೈ 2024, 15:45 IST
ಅನಿಲ್‌ಕುಮಾರ್‌ ಅರ್ಜುನ್‌ ಕಾಂಬಳೆ
ಅನಿಲ್‌ಕುಮಾರ್‌ ಅರ್ಜುನ್‌ ಕಾಂಬಳೆ   

ಬೀದರ್‌: ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಗುರುವಾರ ಆಹಾರ ಶಿರಸ್ತೇದಾರ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಇಬ್ಬರು ಸಹೋದರರನ್ನು ಘಟನೆ ನಡೆದ ನಾಲ್ಕು ಗಂಟೆಗಳಲ್ಲೇ ಪೊಲೀಸರು ಬಂಧಿಸಿದ್ದಾರೆ.

ನಗರದ ಎಂ.ಡಿ. ಅಮನ್‌, ಮೊಹಮ್ಮದ್‌ ಜಿಶಾನ್‌ ಬಂಧಿತರು. ಇರಿತಕ್ಕೊಳಗಾದ ಶಿರಸ್ತೇದಾರ್‌ ಅನಿಲ್‌ಕುಮಾರ್‌ ಅರ್ಜುನ್‌ ಕಾಂಬಳೆ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು, ಪ್ರಾಣಾಪಾಯದಿಂದ ಹೊರಬಂದಿದ್ದಾರೆ.

‘ತಹಶೀಲ್ದಾರ್ ಕಚೇರಿಯ ಆಹಾರ ವಿಭಾಗದಲ್ಲಿ ಅನಿಲ್‌ಕುಮಾರ್‌ ಅರ್ಜುನ್‌ ಕಾಂಬಳೆ ಅವರೊಂದಿಗೆ ಬಂಧಿತ ಎಂ.ಡಿ. ಅಮನ್‌ ಅವರ ಪತ್ನಿ ಕೆಲಸ ನಿರ್ವಹಿಸುತ್ತಾರೆ. ಪತ್ನಿಯೊಂದಿಗೆ ಅನಿಲ್‌ ಕುಮಾರ್‌ ಆತ್ಮೀಯರಾಗಿದ್ದಾರೆ ಎಂಬ ಅನುಮಾನದ ಮೇಲೆ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಮನ್‌ ಹಾಗೂ ಆತನ ಸಹೋದರ ಮೊಹಮ್ಮದ್‌ ಜಿಶಾನ್‌ ಕಚೇರಿಯೊಳಗೆ ಹೋಗಿ, ಅನಿಲ್‌ಕುಮಾರ್ ಅವರ ಕೆಲಸಕ್ಕೆ ಅಡ್ಡಿಪಡಿಸಿ, ಜಾತಿ ನಿಂದನೆ ಮಾಡಿ, ಚಾಕುವಿನಿಂದ ಎಡಗೈ ರಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ಇಬ್ಬರನ್ನು ಘಟನೆ ನಡೆದ ನಾಲ್ಕು ಗಂಟೆಗಳ ಒಳಗೆ ಜಿಲ್ಲೆಯಲ್ಲಿಯೇ ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ತಿಳಿಸಿದ್ದಾರೆ.

ADVERTISEMENT

ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.