ಚಿಟಗುಪ್ಪ: ‘ಲೋಕಸಭಾ ಚುನಾವಣೆ ದೇಶದ ಹಿತ ಕಾಪಾಡುವ ಚುನಾವಣೆಯಾಗಿದ್ದು, ಕಾಂಗ್ರೆಸ್ ಪಕ್ಷ ಸ್ವಾರ್ಥ ಸಾಧನೆಗಾಗಿ ದೇಶದ ಸುಭದ್ರತೆ ಕಾಪಾಡುವಲ್ಲಿ ವಿಫಲವಾಗಿದ್ದು, ಕೇವಲ ಮತದಾರರಲ್ಲಿ ಜಾತಿ- ಮತಗಳ ವಿಷಬೀಜ ಬಿತ್ತುವ ಕಾರ್ಯಮಾಡಿದೆ’ ಎಂದು ಲೋಕಸಭಾ ಅಭ್ಯರ್ಥಿ ಭಗವಂತ ಖೂಬಾ ಆರೋಪಿಸಿದರು.
ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,‘ದೇಶ ಆರ್ಥಿಕ ಸ್ವಾವಲಂಬನೆಯತ್ತ ಮುನ್ನಡೆಯುತ್ತಿದೆ. ಕಾರಣ ಮತದಾರರು ಈ ಬಾರಿ ಮತ್ತೆ ಬಿಜೆಪಿ ಅಭ್ಯರ್ಥಿಗಳಿಗೆ ಮತಚಲಾಯಿಸಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಮಾಡುವಂತೆ ಮಾಡಬೇಕು’ ಎಂದು ಹೇಳಿದರು.
‘65 ವರ್ಷ ರಾಜಕಾರಣ ನಡೆಸಿದ ಈಶ್ವರ ಖಂಡ್ರೆ ಅವರ ಸಾಧನೆ ಜಿಲ್ಲೆಗೆ ಶೂನ್ಯ. ಕೇವಲ ಜಾತಿ ಆಧಾರದ ಮೇಲೆ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ಕೇವಲ ಸುಳ್ಳು ಹೇಳುವ ಮೂಲಕ ಲಿಂಗಾಯತ ಸಮಾಜಕ್ಕೆ ಯಾವುದೇ ಕೊಡುಗೆ ನಿಮ್ಮಿಂದ ಲಭಿಸಿಲ್ಲ. ಭಾಲ್ಕಿ ಹಿರೇಮಠದ ಸಂಸ್ಥೆ ತಮ್ಮ ಸುಪತ್ತಿಗೆ ಪಡೆದು ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡವರು ನೀವು’ ಎಂದು ಆಪಾದಿಸಿದರು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ,‘ಬಿಜೆಪಿ ಕೇಂದ್ರ ಸರ್ಕಾರದ ಸಾಧನೆಗಳು ಮತದಾರರಿಗೆ ತಿಳಿಸಿ ಮತಯಾಚನೆ ಮಾಡಬೇಕು’ ಹೇಳಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ,‘ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರಿಗೆ ಸಮರ್ಪಕ ಪರಿಹಾರ ನೀಡಿಲ್ಲ. ಎರಡು ಸಾವಿರ ಕೊಡುವ ಬಗ್ಗೆ ಘೋಷಣೆ ಮಾಡಿದ್ದರೂ ಇದುವರೆಗೆ ಯಾರ ಖಾತೆಗೂ ಹಣ ಜಮವಾಗಿಲ್ಲ, ಕೇಂದ್ರದ ಬಿಜೆಪಿ ಸರ್ಕಾರ ರೈತರ, ಪ್ರತಿ ನಾಗರಿಕನ ಪ್ರಗತಿಗೆ ಹಲವು ಯೋಜನೆ ರೂಪಿಸಿ ಜಾರಿಗೊಳಿಸಿದೆ’ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಶ್ರೀಮಂತ ಪಾಟೀಲ, ಸುಭಾಷ ಕುಂಬಾರ ಮಾತನಾಡಿದರು. ಅಮರನಾಥ ಪಾಟೀಲ, ಬಸವರಾಜ್ ಆರ್ಯ, ಬಸವರಾಜ್, ಹಣಮಂತರಾವ್ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಅಶೋಕ ಹೊಕ್ರಾಣೆ, ಪ್ರಭಾಕರ ನಾಗರಾಳೆ, ರಾಶೀದ ಅಲಿ ಪಟೇಲ್, ಸೂರ್ಯಕಾಂತ ಮಠಪತಿ, ತಬರೇಜ್, ಪದ್ಮಾವತಿ, ಲಕ್ಷ್ಮಿ ಶರಣಪ್ಪ, ಸುಭಾಷ್ ಕುಂಬಾರ, ಪ್ರವೀಣ ರಾಜಾಪೂರ್, ಸಚಿನ ಮಠಪತಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.