ಖಟಕಚಿಂಚೋಳಿ: ಸದ್ಯ ಬಹುತೇಕ ತರಕಾರಿ ಬೆಲೆ ದುಬಾರಿಯಾಗಿರುವುದರಿಂದ ಹೋಬಳಿಯ ಎಣಕೂರ ಗ್ರಾಮದ ರೈತ ರಾಜಕುಮಾರ ಓತಗೆ ಚವಳಿಕಾಯಿ ಬೆಳೆದು ಅಧಿಕ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ಬೇಸಿಗೆಯಿರುವುದರಿಂದ ಎಲ್ಲೆಡೆ ನೀರಿನ ಕೊರತೆ ಇದೆ. ಆದ್ದರಿಂದ ರಾಜಕುಮಾರ ಅವರು ಸಾಂಪ್ರದಾಯಿಕ ಬೆಳೆಗಳೊಂದಿಗೆ ತಮ್ಮ ಅರ್ಧ ಎಕರೆಯಲ್ಲಿ ಚವಳಿಕಾಯಿ ಬೆಳೆದಿದ್ದಾರೆ.
‘ಬೆಳೆಯೂ ಹುಲುಸಾಗಿ ಬೆಳೆದಿದ್ದು ಅಧಿಕ ಇಳುವರಿ ಬರುತ್ತಿದೆ. ಅದಕ್ಕೆ ತಕ್ಕಂತೆ ಬೆಲೆಯೂ ಸಿಗುತ್ತಿದೆ. ತಮ್ಮ ಅರ್ಧ ಎಕರೆ ಭೂಮಿ ಹದ, ಬೀಜ, ಬಿತ್ತನೆ ಸೇರಿದಂತೆ ಇನ್ನಿತರ ಖರ್ಚು ಸೇರಿ ಕೇವಲ ₹8 ಸಾವಿರ ಖರ್ಚಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿರುವುದರಿಂದ ಖರ್ಚು ವೆಚ್ಚ ಹೋಗಿ ₹ 25 ಸಾವಿರ ಲಾಭ ದೊರಕಬಹುದು’ ಎಂದು ರೈತ ರಾಜಕುಮಾರ ತಿಳಿಸಿದರು.
‘ಚವಳಿಕಾಯಿ ಬೆಳೆ ಕೇವಲ ಮೂರು ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಪ್ರತಿ ಬಾರಿ ಕಟಾವು ಮಾಡಿದಾಗ ಸುಮಾರು 50-60 ಕೆಜಿ ಇಳುವರಿ ಬರುತ್ತಿದೆ. ಹೀಗೆ ವಾರಕ್ಕೆ ಎರಡು ಬಾರಿಯಂತೆ ಒಂದು ತಿಂಗಳವರೆಗೆ ಕಟಾವು ಮಾಡಬಹುದು’ ಎನ್ನುತ್ತಾರೆ ಅವರು.
‘ಸದ್ಯ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ತರಕಾರಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಕಳೆದ ವಾರ ಪ್ರತಿ ಕೆಜಿಗೆ ₹ 20ಕ್ಕೆ ಮಾರಾಟವಾದರೆ ಸದ್ಯ ಪ್ರತಿ ಕೆಜಿಗೆ ₹35-40 ರವರೆಗೆ ಮಾರಾಟ ಆಗುತ್ತಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಹೆಚ್ಚಾಗಬಹುದು. ಹೀಗಾಗಿ ಲಾಭದಲ್ಲಿ ಹೆಚ್ಚಳವಾಗಲಿದೆ’ ಎಂಬುದು ರೈತನ ಮಾತು.
‘ರೈತ ರಾಜಕುಮಾರ ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಹೊಲದಲ್ಲಿಯೇ ಕೆಲಸ ಮಾಡುತ್ತಾ ಕಾಲ ಕಳೆಯುತ್ತಾರೆ. ಅಲ್ಲದೇ ತಮಗಿರುವ ಸ್ವಲ್ಪ ಜಾಗದಲ್ಲಿ ಬಹು ಬೆಳೆ ಬೆಳೆದು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ’ ಎಂದು ಗ್ರಾಮದ ಹಿರಿಯರು ತಿಳಿಸುತ್ತಾರೆ.
ಬಿಸಿಲಿನ ಪ್ರಮಾಣ ಹೆಚ್ಚಳ; ಬೆಲೆ ದುಬಾರಿ ಪ್ರತಿ ಕಟಾವಿಗೆ 50–60 ಕೆಜಿ ಇಳುವರಿ ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ
ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಮಿಶ್ರ ಬೇಸಾಯ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕುರಾಜಕುಮಾರ ಓತಗೆ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.