ಕೊಳಾರ(ಕೆ)(ಜನವಾಡ): ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬೀದರ್ ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಪರಮೇಶ್ವರ ನಾಯ್ಕ ಸಲಹೆ ಮಾಡಿದರು.
ನೌಬಾದ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಬೀದರ್ ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಕಾರಾತ್ಮಕ ಚಿಂತನೆಯಿಂದ ಜೀವನದಲ್ಲಿ ಅಂದುಕೊಂಡ ಗುರಿ ತಲುಪಬಹುದು. ನಕಾರಾತ್ಮಕ ಮನೋಭಾವದಿಂದ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ತಿಳಿಸಿದರು.
ಪ್ರಾಚಾರ್ಯೆ ಪ್ರೊ. ಜಯಶ್ರೀ ಪ್ರಭಾ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಸಮಯ ಪ್ರಜ್ಞೆ ರೂಢಿಸಿಕೊಳ್ಳಬೇಕು. ಪರಿಶ್ರಮದ ಮೂಲಕ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಶರಗಾರ ಮಾತನಾಡಿ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ನುಡಿದರು.
ರಾಮಸ್ವಾಮಿ ಪೆರಿಯಾರ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಸಿದ್ರಾಮ ಹಿಂದೊಡ್ಡಿ, ಪಿಡಿಒ ಕುಮುದಾ, ಕಾಲೇಜಿನ ಎನ್ಎಸ್ಎಸ್ ಘಟಕದ ಸಂಚಾಲಕ ಸುಚಿತಾನಂದ ಮಲ್ಕಾಪುರ ಮಾತನಾಡಿದರು.
ಕಾಲೇಜಿನ ಎನ್ಎಸ್ಎಸ್ ಘಟಕದ ಸಲಹಾ ಸಮಿತಿ ಸದಸ್ಯ ರಾಜಕುಮಾರ ಅಲ್ಲೂರೆ, ಗಿರಿಜಾ ಮಂಗಳಗಟ್ಟೆ, ಪ್ರೊ. ಏಲಿಶಾ ದೇವಿದಾಸ, ಚನ್ನಕೇಶವಮೂರ್ತಿ, ಪ್ರೊ.ಪಲ್ಲದೆ ಮಹೇಶ್ವರಿ, ನಾಗಮ್ಮ ಬಂಗರಗಿ, ಪ್ರೊ. ಶ್ರೀಕಾಂತ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.