ಬೀದರ್: ‘ನವರಾತ್ರಿ ಉತ್ಸವದ ಅಂಗವಾಗಿ ಅ. 17ರಿಂದ 23ರ ವರೆಗೆ ಜಿಲ್ಲೆಯಾದ್ಯಂತ ‘ದಸರಾ ದರ್ಬಾರ್’ ಹಮ್ಮಿಕೊಳ್ಳಲಾಗಿದೆ’ ಎಂದು ‘ಸಾರೆಗಮಪ’ ಸಂಸ್ಥೆ ಅಧ್ಯಕ್ಷ ಮಹೇಶಕುಮಾರ ಕುಂಬಾರ ತಿಳಿಸಿದರು.
‘ಮಾತಾ ಕಾ ದರ್ಬಾರ್’ ಹಾಗೂ ನೃತ್ಯ ಉತ್ಸವ ದಸರಾ ದರ್ಬಾರ್ನ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಅ. 17ರಂದು ಸಂಜೆ 6ಕ್ಕೆ ಭಾಲ್ಕಿ ಪಟ್ಟಣದ ಅಂಚೆ ಕಚೇರಿ ಹಿಂಭಾಗದ ಭವಾನಿ ನಗರದಲ್ಲಿ ದಸರಾ ದರ್ಬಾರ್ ಉದ್ಘಾಟನಾ ಸಮಾರಂಭ ಜರುಗಲಿದೆ. ಅ. 18ರಂದು ಸಂಜೆ 6ಕ್ಕೆ ಔರಾದ್ ತಾಲ್ಲೂಕಿನ ಕೌಠಾ (ಕೆ) ಗ್ರಾಮದ ವೈಷ್ಣೋದೇವಿ ಮಹಾಶಕ್ತಿ ಪೀಠದಲ್ಲಿ, ಅ. 19ರಂದು ನೌಬಾದ್ನ ಕೆಎಸ್ಆರ್ಪಿ ಪೊಲೀಸ್ ಕ್ವಾರ್ಟರ್ಸ್ನ ಜೈ ಭವಾನಿ ಮಾತಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಅ. 20ರಂದು ಬಸವಕಲ್ಯಾಣದ ತ್ರಿಪುರಾಂತ ಓಣಿಯ ವಾಲ್ಮೀಕಿ ವೃತ್ತದ ಜೈ ಭವಾನಿ ಮಾತಾ ಮಂದಿರದಲ್ಲಿ, ಅ. 21ರಂದು ಬೀದರ್ನ ಗುಂಪಾ ಶಿವಾಜಿ ನಗರದ ಹನುಮಾನ ಮಂದಿರದಲ್ಲಿ, ಅ. 22ರಂದು ಮಂಗಲಪೇಟ್ನಲ್ಲಿರುವ ಜೈ ಭವಾನಿ ಮಾತಾ ಮಂದಿರದಲ್ಲಿ ಹಾಗೂ ಅ. 23ರಂದು ನಗರದ ಸಾಯಿ ಶಾಲೆ ಮೈದಾನದಲ್ಲಿ ಶ್ರೀರಾಮಲೀಲಾ ಉತ್ಸವದೊಂದಿಗೆ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.
ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಗೀತ ಕಲಾವಿದರಾದ ಧೋಂಡಿರಾಮ ಧುರ್ವೆ, ಬಲರಾಮ ಪಾಂಚಾಳ, ಜೆಸ್ಸಿ ಸೋನವಾನೆ, ಪ್ರಿಯಾ ಗುರುದೇವ, ಮಹಾರಾಷ್ಟ್ರದ ಸಂಗೀತ ನಿರ್ದೇಶಕರಾದ ಜಬ್ಬಾರ ಮುರ್ಷದ್, ಧನಂಜಯ ಅವರ ತಂಡವು ವಾದ್ಯ ಸಂಗೀತದೊಂದಿಗೆ ಭಕ್ತಿಗೀತೆ, ಜಾನಪದ, ತತ್ವಪದ ಮತ್ತು ದೇಶಭಕ್ತಿಗೀತೆಗಳನ್ನು ಪ್ರಸ್ತುತಪಡಿಸುವರು ಎಂದು ತಿಳಿಸಿದರು.
ಪುಣೆಯ ನೃತ್ಯ ಕಲಾವಿದೆ ಕು.ಸ್ನೇಹಾ ಮತ್ತು ಅಕ್ಷಯ ಅವರ ನಿರ್ದೇಶನದಲ್ಲಿ ಶಿವತಾಂಡವ, ಮಹಾಕಾಳಿ ಮತ್ತು ರಾಮಾಯಣ ಕುರಿತು ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಸನಾತನ ಸಂಸ್ಕೃತಿ ಎತ್ತಿ ಹಿಡಿಯುವುದು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ವೈಭವೀಕರಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಯುವ ಅಧ್ಯಕ್ಷ ಗೋರಖನಾಥ ಕುಂಬಾರ, ಕಲಾವಿದರಾದ ಧೋಂಡಿರಾಮ ಧುರ್ವೆ, ಬಲರಾಮ ಪಾಂಚಾಳ, ಜೆಸ್ಸಿ ಸೋನವಾನೆ, ಪ್ರಿಯಾ ಗುರುದೇವ, ಕು.ಸ್ನೇಹಾ, ಅಕ್ಷಯ, ಅಭಿ, ಸಾಯಿ, ಕೃಷ್ಣಾ, ಫರ್ದಿನ್, ಸುರೇಶ, ಸುದರ್ಶನ, ದೀನು, ಜಾನ, ರಚಿತಾ, ವಿಶಾಲ, ಅಜಿತ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.