ಬೀದರ್: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಭೂರಹಿತರ ಸಮೀಕ್ಷೆ ನಡೆಸಬೇಕೆಂದು ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಶಾಖೆ ಆಗ್ರಹಿಸಿದೆ.
ಈ ಸಂಬಂಧ ಸಮಿತಿಯ ಪ್ರಮುಖರು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಭೂಸುಧಾರಣೆ ಕಾಯ್ದೆ ಜಾರಿಗೆ ಬಂದ ನಂತರ ಕೂಲಿ ಕಾರ್ಮಿಕ ಭೂ ಮಾಲೀಕನಾಗುವ ಅವಕಾಶ ಕಲ್ಪಿಸಿತ್ತು. ಆದರೆ, ಅದು ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಭ್ರಷ್ಟ ಆಡಳಿತ, ಸ್ವಾರ್ಥ ರಾಜಕಾರಣದಿಂದ ನ್ಯಾಯ ಸಿಕ್ಕಿಲ್ಲ. ಸಂಪತ್ತು ಸಮಾನವಾಗಿ ಹಂಚಿಕೆಯಾಗಿಲ್ಲ. ಪರಿಶಿಷ್ಟರಿಗೆ ಉಳುಮೆಗೆ ಜಾಗ ಇಲ್ಲ. ಉಪಜೀವನಕ್ಕೆ ಸಮಸ್ಯೆಯಾಗಿದೆ. ಸಮೀಕ್ಷೆ ನಡೆಸಿ, ಜಮೀನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.
ಪ್ಯಾಂಥರ್ ಜಿಲ್ಲಾಧ್ಯಕ್ಷ ವೈಜಿನಾಥ ಸಿಂಧೆ, ರಾಜ್ಯ ಕಾರ್ಯದರ್ಶಿ ಮನೋಹರ ಮೋರೆ, ಜಿಲ್ಲಾ ಉಪಾಧ್ಯಕ್ಷರಾದ ಸಿದ್ದಾರ್ಥ ಡಾಂಗೆ, ಶಿವಾನಂದ ಕಟ್ಟಿಮನಿ, ಪ್ರಮುಖರಾದ ಕೈಲಾಶ ಭಾವಿಕಟ್ಟಿ, ಮಾರುತಿ ಭಾವಿಕಟ್ಟಿ, ಗಣಪತಿ ಅಷ್ಟೂರೆ, ಅಶೋಕ ಸಿಂಧೆ, ಸುಶೀಲಕುಮಾರ ಭೋಲಾ, ರಾಜಕುಮಾರ ಉಜ್ವಲೇ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.