ADVERTISEMENT

ಕೃಷಿ–ಖುಷಿ: ಒಂದು ಎಕರೆಯಲ್ಲಿ ಪಪ್ಪಾಯಿ, ಶುಂಠಿ ಬೆಳೆದು ₹ 18 ಲಕ್ಷ ಗಳಿಸಿದ ರೈತ

ಗಿರಿರಾಜ ಎಸ್ ವಾಲೆ
Published 17 ಅಕ್ಟೋಬರ್ 2024, 5:53 IST
Last Updated 17 ಅಕ್ಟೋಬರ್ 2024, 5:53 IST
ಖಟಕಚಿಂಚೋಳಿ ಗ್ರಾಮದ ರೈತ ಪ್ರಭು ಮಸಾನೆ ಅವರು ತಮ್ಮ ಹೊಲದಲ್ಲಿ ಬೆಳೆದ ಪಪ್ಪಾಯಿ ಬೆಳೆಯೊಂದಿಗೆ
ಖಟಕಚಿಂಚೋಳಿ ಗ್ರಾಮದ ರೈತ ಪ್ರಭು ಮಸಾನೆ ಅವರು ತಮ್ಮ ಹೊಲದಲ್ಲಿ ಬೆಳೆದ ಪಪ್ಪಾಯಿ ಬೆಳೆಯೊಂದಿಗೆ   

ಖಟಕಚಿಂಚೋಳಿ: ಗ್ರಾಮದ ರೈತ ಪ್ರಭು ಮಸಾನೆ ಅವರು ಕೇವಲ ಒಂದು ಎಕರೆಯಲ್ಲಿ ಶುಂಠಿ ಹಾಗೂ ಪಪ್ಪಾಯಿ ಬೆಳೆದು ₹ 18 ಲಕ್ಷಕ್ಕೂ ಅಧಿಕ ಆದಾಯ ಗಳಿಸಿ ಯಶಸ್ಸು ಕಂಡಿದ್ದಾರೆ.

ಕೇವಲ ಏಳನೇ ತರಗತಿಯವರೆಗೆ ಓದಿದ ಮಸಾನೆ ಅವರು ಕೃಷಿಯಲ್ಲಿ ಇಪ್ಪತ್ತೈದು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಅವರಿಗೆ ಒಟ್ಟು ಏಳು ಎಕರೆ ಭೂಮಿ ಇದೆ. ಅದರಲ್ಲಿ ಆರು ಎಕರೆಯಲ್ಲಿ ಸಾಂಪ್ರದಾಯಿಕ ಬೆಳೆ ಬೆಳೆದಿದ್ದಾರೆ. ಒಂದು ಎಕರೆಯ ಅರ್ಧಭಾಗಕ್ಕಿಂತಲೂ ಹೆಚ್ಚು ಜಾಗದಲ್ಲಿ ಬೆಳೆದ ಶುಂಠಿ ಖರ್ಚು ಹೋಗಿ ₹13 ಲಕ್ಷ ಆದಾಯ ತಂದು ಕೊಟ್ಟಿದೆ. ಇನ್ನುಳಿದ ಪ್ರದೇಶದಲ್ಲಿ ಬೆಳೆದ ಪಪ್ಪಾಯಿ ಈಗಾಗಲೇ ₹5 ಲಕ್ಷ ಗಳಿಕೆಯಾಗಿದೆ’ ಎನ್ನುತ್ತಾರೆ ರೈತ ಮಸಾನೆ.

‘ಒಂದು ಎಕರೆ ಭೂಮಿಯಲ್ಲಿ ಶುಂಠಿ ಹಾಗೂ ಪಪ್ಪಾಯಿ ಬೆಳೆಯಲು ಭೂಮಿ ಹದ, ಬೀಜ ಬಿತ್ತನೆ, ಔಷಧ ಸಿಂಪಡಣೆ, ಕಳೆ ತೆಗೆಯುವುದು ಸೇರಿ ಸುಮಾರು ₹2 ಲಕ್ಷದವರೆಗೆ ಖರ್ಚಾಗಿದೆ’ ಎನ್ನುತ್ತಾರೆ ಅವರು.

ADVERTISEMENT

‘ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಶುಂಠಿಗೆ ಬೇಡಿಕೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಬೆಳೆ ಹುಲುಸಾಗಿ ಬೆಳೆದಿದ್ದು ಅಧಿಕ ಇಳುವರಿ ಬಂದಿದೆ. ಪ್ರತಿ ಕ್ವಿಂಟಲ್ ಗೆ ₹12 ಸಾವಿರದಂತೆ 135 ಕ್ವಿಂಟಲ್ ಶುಂಠಿ ಮಾರಾಟ ಮಾಡಲಾಗಿದೆ. ಇದರಿಂದ ಆದಾಯದಲ್ಲಿ ಹೆಚ್ಚಳವಾಗಿದೆ’ ಎಂದು ರೈತ ಸಂತಸ ವ್ಯಕ್ತಪಡಿಸುತ್ತಾರೆ.

ಬೆಳೆಯ ಮಧ್ಯದಲ್ಲಿ ಮಿಶ್ರ ಬೇಸಾಯವಾಗಿ ಬೆಳೆದ ಪಪ್ಪಾಯಿ ರೈತನ ಕೈ ಹಿಡಿದಿದೆ. ಅದು ಕೂಡ ಪ್ರತಿ ಕೆಜಿಗೆ ₹ 25 ರಂತೆ ಮಾರಾಟವಾಗಿ  ಆದಾಯ ದ್ವಿಗುಣಗೊಳಿಸಿದೆ.

‘ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ಹಾಯಿಸುವುದು, ಔಷಧಿ ಸಿಂಪಡಣೆ, ಕಳೆ ತೆಗೆಯುವುದು ಸೇರಿದಂತೆ ಎಲ್ಲ ಸರಿಯಾದ ಸಮಯಕ್ಕೆ ಮಾಡಿಸಿದ್ದೇನೆ. ಇದಕ್ಕೆ ಬೆಳೆ ಚೆನ್ನಾಗಿ ಬೆಳೆದಿದ್ದು ಉತ್ತಮವಾದ ಬೆಲೆಯೂ ಲಭಿಸಿದೆ’ ಎನ್ನುತ್ತಾರೆ ಪ್ರಭು.

‘ಪ್ರಸ್ತುತ ದಿನಗಳಲ್ಲಿ ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿರುವವರಿಗೆ ಪ್ರಭು ಮಸಾನೆ ಅವರು ಪ್ರೇರಣೆಯಾಗಿದ್ದಾರೆ. ಸತತ ಪ್ರಯತ್ನದಿಂದ ಯಶಸ್ಸು ಪಡೆಯಬಹುದು. ಕಡಿಮೆ ಭೂಮಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ’ ಎಂದು ಗ್ರಾಮದ ರೇವಣಸಿದ್ಧ ಜಾಡರ್ ತಿಳಿಸುತ್ತಾರೆ.

‘ಯುವಕರು ನಗರ ಪ್ರದೇಶಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಸೂಕ್ತವಾದ ಕೆಲಸ ಸಿಗದೇ ಹತಾಶರಾಗಿ ಜೀವನದಲ್ಲಿ ಜಿಗುಪ್ಸೆ ಹೊಂದುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಯುವಕರು ಸೂಕ್ತವಾದ ಕೆಲಸ ಸಿಗದ ಪಕ್ಷದಲ್ಲಿ ಹತಾಶರಾಗದೇ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ಸು ಪಡೆಯಬೇಕು’ ಎಂದು ರೈತ ಪ್ರಭು ಮಸಾನೆ ಅವರು ಯುವಕರಿಗೆ ಸಲಹೆ ನೀಡುತ್ತಾರೆ.

16ಕೆಟಿಸಿ2
ಪ್ರಸ್ತುತ ದಿನಗಳಲ್ಲಿ ಯುವಕರು ಕೃಷಿ ಕ್ಷೇತ್ರದಿಂದ ದೂರ ಸರಿಯುತ್ತಿರುವುದು ಬಹಳ ದುರಂತದ ಸಂಗತಿ. ಹೀಗಾಗಿ ಈಗಲೇ ಎಚ್ಚೆತ್ತುಕೊಂಡು ಕೃಷಿ ಲಾಭದಾಯಕವಾಗಿಸಲು ಮುಂದಾಗಬೇಕು
ಪ್ರಭು ಮಸಾನೆ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.