ಔರಾದ್: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಗುರುವಾರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಾಸಕ ಪ್ರಭು ಚವಾಣ್, ಪಶು ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ವಸಂತ ವಕೀಲ್, ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಮತ್ತಿತರರು ಪಟ್ಟಣದ ಬಿಜೆಪಿ ಕಚೇರಿಯಿಂದ ಎಪಿಎಂಸಿ ವೃತ್ತದ ವರೆಗೆ ಎತ್ತಿನ ಬಂಡಿಯಲ್ಲಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಕೆಲ ಹೊತ್ತು ಬೀದರ್-ಔರಾದ್ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಮೊದಲು ಬಡವರ ಬಗ್ಗೆ ತೋರುತ್ತಿದ್ದ ಅನುಕಂಪ ಈಗ ಎಲ್ಲಿ ಹೋಗಿದೆ. ರಾತ್ರೋ ರಾತ್ರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಸುವ ಮೂಲ ಅವರ ಮತ್ತೊಂದು ಮುಖವಾಡ ಕಳಚಿ ಬಿದ್ದಿದೆ’ ಎಂದು ಶಾಸಕ ಪ್ರಭು ಚವಾಣ್ ಕಿಡಿ ಕಾರಿದರು.
‘ಜನರಿಗೆ ಗ್ಯಾರಂಟಿ ಕಾರ್ಡ್ ಹಂಚುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಕೊಡುತ್ತಿಲ್ಲ. ಇದರಿಂದ ಅನೇಕ ಕಾಂಗ್ರೆಸ್ ಶಾಸಕರುಗಳೇ ಒಳಗೊಳಗೆ ಕುದಿಯುತ್ತಿದ್ದಾರೆ. ಹೀಗಾಗಿ ಇಂತಹ ಜನ ವಿರೋಧಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ’ ಎಂದು ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಖಂಡೋಬಾ ಕಂಗಟೆ, ರಾಮರೆಡ್ಡಿ ಪಾಟೀಲ, ಬಸವರಾಜ ಪಾಟೀಲ, ಶಿವಾನಂದ ವಡ್ಡೆ, ಸಚಿನ್ ರಾಠೋಡ್, ಮಾರುತಿರೆಡ್ಡಿ, ಶಿವರಾಜ ಅಲ್ಮಾಜೆ, ಅಶೋಕ ಅಲ್ಮಾಜೆ, ರಾಜಕುಮಾರ ಸೊರಳ್ಳಿ, ಸಂಜುಕುಮಾರ ವಡೆಯರ್, ಸಂತೋಷ ಪೋಕಲವಾರ, ಕೇರಬಾ ಪವಾರ್, ಬನ್ಸಿ ನಾಯಕ್, ರಾವುಸಾಬ್ ಪಾಟೀಲ, ಶರಣಬಸಪ್ಪ ಪಾಟೀಲ, ಶಿವಕಾಂತ ಮಜಗೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.