ಬೀದರ್: ನಗರದ ಮಾತೋಶ್ರೀ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಮಂಗಳವಾರ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಳೆಯ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ, ಅವರ ಸೇವೆ ಸ್ಮರಿಸಿದರು. ಶಾಲೆಯ ಅಧ್ಯಕ್ಷೆ ನಾಗಮ್ಮ ಬಸಪ್ಪ ಧೂಳೆ ಮಾತನಾಡಿ, ವಿದ್ಯೆ ಎಂಬ ಸಂಪತ್ತು ಬಹಳ ಅಮೂಲ್ಯವಾದದ್ದು. ಅಂತಹ ವಿದ್ಯೆಯನ್ನು ಹಲವಾರು ವಿದ್ಯಾರ್ಥಿಗಳಿಗೆ ಧಾರೆ ಎರೆಯಲು 1983ರಲ್ಲಿ ಗಡಿ ಭಾಗದ ಬೀದರ್ ಜಿಲ್ಲೆಯಲ್ಲಿ ತಲೆಯೆತ್ತಿ ನಿಂತ ಶಾಲೆಯೇ ಮಾತೋಶ್ರೀ ನಾಗಮ್ಮ ಹಿರಿಯ ಪ್ರಾಥಮಿಕ ಶಾಲೆ ಎಂದರು.
ಶಿಕ್ಷಣವೆಂದರೆ ಕೇವಲ ವಿದ್ಯಾರ್ಥಿಗಳ ತಲೆಯಲ್ಲಿ ವಿಷಯಗಳನ್ನು ತುಂಬುವುದಲ್ಲ ಮಕ್ಕಳ ಬುದ್ಧಿವಂತಿಕೆಯನ್ನು ಹರಿತಗೊಳಿಸುವ ವಿಶ್ಲೇಷಣೆ, ಸಾಮರ್ಥ್ಯ ವಿಸ್ತರಿಸಿ ವಿವೇಚನೆಯನ್ನು ಚುರುಕುಗೊಳಿಸುವ ಕ್ರಿಯೆ ಎಂದು ಕಾರ್ಯದರ್ಶಿ ಸುವರ್ಣ ಶಿವರಾಜ ಧೂಳೆ ಹೇಳಿದರು.
ಶಿಕ್ಷಕ ಎಂ.ಎ.ರೆಹಮಾನ್ ಮಾತನಾಡಿ, ನನ್ನ ವಿದ್ಯಾರ್ಥಿಗಳು ಉತ್ತಮ ಹುದ್ದೆಯಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳುತ್ತಿರುವುದು ಖುಷಿ ತಂದಿದೆ ಎಂದರು.
ಶಿಕ್ಷಕ ಬಾಲಾಜಿ ಬಿರಾದಾರ ಮಾತನಾಡಿ, ಮೌಲ್ಯಯುತ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ವ್ಯಕ್ತಿಯ ಜೀವನದಲ್ಲಿ ಮಹತ್ವವಾದುದು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ಶಿವರಾಜ್ ಧೂಳೆ ಈ ಶಾಲೆಗೆ ಅಡಿಪಾಯ ಹಾಕಿ ಬೀದರ್ ನಗರದಲ್ಲಿ ಹಲವಾರು ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣ ಪಡೆಯಲು ಅನುವು ಮಾಡಿಕೊಟ್ಟರು ಎಂದು ಕೃತಜ್ಞತೆ ಸಲ್ಲಿಸಿದರು.
ಮಹೇಶ ಧೂಳೆ, ಶಿಕ್ಷಕರಾದ ಪ್ರೇಮಲತಾ ಹಿರೇಮಠ, ರೇಣುಕಾ ಬುಯ್ಯ, ಶಶಿಕಲಾ ಚಿಟಗುಪ್ಪಿಕಾರ, ಜಗದೇವಿ ಪಾಟೀಲ, ಚಂದ್ರಕಾಂತ್ ಸೇಳ್ಕೆ, ಸಂಗಪ್ಪ ಸೂರ್ಯವಂಶಿ, ಹಳೆಯ ವಿದ್ಯಾರ್ಥಿಗಳಾದ ಮಹೇಶ ಧೂಳೆ, ವೆಂಕಟೇಶ್ ಧುಮಾಳೆ, ಶ್ವೇತಾ, ರಮೇಶ, ರಾಜಕುಮಾರ, ಸತೀಶ್, ಕೋಮಲ ಶೀಲವಂತ, ಮಾಣಕಾದೇವಿ ಪಾಟೀಲ, ಸೂರ್ಯಕಾಂತ್ ಪರಶೆಟ್ಟಿ, ವಿನೋದ ಹೊನ್ನಾ, ಪ್ರಕಾಶ, ಮಹಾರುದ್ರ, ಸುನೀಲ ಗಂದಿಗುಡೆ, ಮೌಲಾನಾ, ಓಂಕಾರ್, ಜಗನ್ನಾಥ ಹಾಜರಿದ್ದರು.
ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಈ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಸಂಘರ್ಷ ಧೂಮಾಲ್, ಮಾರುತಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.