ಬೀದರ್: ಹೈದರಾಬಾದ್ನ ಚಿಂತಲದ ಬಿಲ್ಡರ್ ಕೊಲೆ ಪ್ರಕರಣವನ್ನು ಬೀದರ್ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ.
ಘಟನೆ ಸಂಬಂಧ ಮೂವರನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಇನ್ನೂ ಮೂವರ ಪತ್ತೆ ಕಾರ್ಯ ನಡೆದಿದೆ.
‘ಜಿಲ್ಲೆಯ ಮನ್ನಾಎಖೇಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಳಮಡಗಿ ಗ್ರಾಮದ ಧಾಬಾವೊಂದರ ಬಳಿ ಮೇ 25ರಂದು ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆಯಾಗಿತ್ತು. 21 ಸಲ ಇರಿದು ಕೊಲೆ ಮಾಡಲಾಗಿತ್ತು. ಮೃತರ ಸಂಬಂಧಿಕರನ್ನು ಪತ್ತೆ ಹಚ್ಚಿದಾಗ, ಹೈದರಾಬಾದ್ನ ಚಿಂತಲದ ಬಿಲ್ಡರ್ ಮಲ್ಲಿಕಾರ್ಜುನರಾವ್ ಗೋಪಾಲರಾವ್ ಕುಪ್ಪಲ ಎಂಬುದು ಅವರಿಂದ ಗೊತ್ತಾಯಿತು. ಮಹಾರಾಷ್ಟ್ರದ ತಾಂಬೊಳ ಗ್ರಾಮದ ಬಿಕ್ ಯಾರ್ಡ್ ರಿಕ್ರಿಯೇಶನ್ ಕ್ಲಬ್ಗೆ ಕಾರಿನಲ್ಲಿ ಹೋಗಿ ಹೈದರಾಬಾದ್ಗೆ ಮರಳುವಾಗ ತಾಳಮಡಗಿ ಸಮೀಪ ಇರಿದು ಸಾಯಿಸಲಾಗಿದೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನಗರದಲ್ಲಿ ಶನಿವಾರ ಮಾಹಿತಿ ಹಂಚಿಕೊಂಡರು.
‘ದೊಡ್ಡ ಬಿಲ್ಡರ್ ಆಗಿದ್ದ ಮಲ್ಲಿಕಾರ್ಜುನರಾವ್ ಸಾಕಷ್ಟು ಆಸ್ತಿ ಸಂಪಾದಿಸಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಲ್ಲಿಕಾರ್ಜುನರಾವ್ ಅವರೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಂಡಿದ್ದ ಆರು ಜನರು, ಅವರನ್ನು ಸಾಯಿಸಿ, ಅವರ ಹೆಣ್ಣು ಮಕ್ಕಳೊಂದಿಗೆ ಮದುವೆಯಾಗಿ ಅವರ ಆಸ್ತಿ ಲಪಟಾಯಿಸಲು ಹೊಂಚು ಹಾಕಿದ್ದರು. ಬಂಧಿತ ಮೂವರನ್ನು ಐದು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ ಹರಿತವಾದ ಚಾಕು, ದೋಚಿದ್ದ ಒಟ್ಟು 10 ತೊಲ ಬಂಗಾರ, ₹2 ಲಕ್ಷ ನಗದು ಹಣದಲ್ಲಿ 5 ತೊಲ ಚಿನ್ನ, ₹56 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.