ADVERTISEMENT

ಬೀದರ್‌ | ಹುಲಸೂರಿನ ಬಹುತೇಕ ಗ್ರಾಮಗಳಲ್ಲಿ ಮಧ್ಯ ರಾತ್ರಿಯಲ್ಲೂ ಸಿಗುತ್ತದೆ ಮದ್ಯ

ಅಕ್ರಮ ಮಾರಾಟ ಅವ್ಯಾಹತ: ಹುಲಸೂರಿನ ಗ್ರಾಮಗಳಲ್ಲಿ ಮಧ್ಯ ರಾತ್ರಿಯಲ್ಲೂ ಸಿಗುತ್ತದೆ ಮದ್ಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 6:19 IST
Last Updated 20 ಸೆಪ್ಟೆಂಬರ್ 2024, 6:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹುಲಸೂರ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಎಗ್ಗಿಲ್ಲದೆ ಮದ್ಯದ ಅಕ್ರಮ ಮಾರಾಟ ನಡೆಯುತ್ತಿದೆ. ಶಾಲೆ, ದೇವಸ್ಥಾನ, ಆಸ್ಪತ್ರೆಗಳ ಪಕ್ಕ ಎಲ್ಲೆಂದರಲ್ಲಿ ಮದ್ಯವನ್ನು ಅಕ್ರವಾಗಿ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೇಲೂರ, ಗಡಿಗೌಡಗಾಂವ, ಹುಲಸೂರ, ತೊಗಲುರ, ಮೀರಖಲ, ಮುಚಳಂಬ, ಭಾಲ್ಕಿ ತಾಲ್ಲೂಕಿನ ಸಾಯಗಾಂವ ಹೋಬಳಿಯ ಮೆಹಕರ, ಅಳವಾಯಿ, ಅಟ್ಟರಗಾ, ಹಲಸಿ ತುಗಾಂವ, ಸಾಯಗಾಂವ, ವಾಂಝರಖೇಡ ಗ್ರಾಮ ಪಂಚಾಯಿತಿ ಸೇರಿ ಅವುಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು ಅಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ. ಮಧ್ಯ ರಾತ್ರಿಯಲ್ಲೂ ಮದ್ಯ ಸಿಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಚುನಾವಣೆ, ಮತ ಎಣಿಕೆ, ಹಬ್ಬಗಳಲ್ಲಿ ಸರ್ಕಾರ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸುತ್ತದೆ. ಇಂಥ ಆದೇಶದ ದುರುಪಯೋಗಪಡಿಸಿಕೊಂಡು ಅಕ್ರಮ ಮದ್ಯ ಮಾರಾಟ ಮಾಡುವವರು ಒಂದು ವಾರಕ್ಕಾಗುವಷ್ಟು ಮದ್ಯವನ್ನು ಸಂಗ್ರಹಿಸಿ ಇಡುವುದರಿಂದ ಹಳ್ಳಿಗಳಲ್ಲಿ ನಿರಂತರವಾಗಿ ಮದ್ಯ ಸಿಗುತ್ತದೆ ಎನ್ನುತ್ತಾರೆ ಕೆಲವು ಗ್ರಾಮಸ್ಥರು.

ADVERTISEMENT

ಮದ್ಯದ ಅಂಗಡಿ ಬಂದ್ ಇರುವ ಸಮಯದಲ್ಲಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಾರೆ. ₹15, ₹20 ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತಾರೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುವವರು ಗ್ರಾಹಕರಿಗೆ ಉದ್ರಿ ನೀಡುವುದರಿಂದ ಮದ್ಯಪ್ರಿಯರು ಅಕ್ರಮವಾಗಿ  ಮಾರಾಟಮಾಡುವವರ ಹತ್ತಿರ ಹೆಚ್ಚಾಗಿ ಹೋಗುತ್ತಾರೆ. ಗ್ರಾಮದ ಹೊರವಲಯದಲ್ಲಿ ನಾಯಿಕೊಡೆಯಂತೆ ಹುಟ್ಟಿರುವ ಡಾಬಾಗಳಿಗೆ ಮಾರಾಟ ಮಾಡುತ್ತಾರೆ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರು ಮಾಹಿತಿ ನೀಡಿದರು.

ಶಾಲೆ, ಕಾಲೇಜು, ದೇವಸ್ಥಾನ, ಆಸ್ಪತ್ರೆಗಳ ಸಮೀಪದಲ್ಲಿ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಿ ಎಂದು ಹಲುವಾರು ಬಾರಿ ಮನವಿ ನೀಡಿದರೂ ಮತ್ತು ದೂರವಾಣಿ ಕರೆಮಾಡಿದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಂತರಭಾರತಿ ಗ್ರಾಮದ ಜನರು ಆರೋಪಿಸಿದ್ದಾರೆ.

ತಾಲ್ಲೂಕಿನ ಯಾವುದೇ ಗ್ರಾಮದವರು ದೂರು ನೀಡಿದರೂ ದೂರುಗಳಿಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಮದ್ಯ ಅಕ್ರಮ ಮಾರಾಟ ಮಾಡುವವರನ್ನು ವಶಕ್ಕೆ ಪಡೆದುಕೊಂಡು ಹೋಗುತ್ತಾರೆ. ಅರ್ಧ ಗಂಟೆ ನಂತರ ಯಾವುದೇ ಕ್ರಮ ತೆಗೆದುಕೊಳ್ಳದೆ ಅವರನ್ನು ಬಿಟ್ಟುಬಿಡುತ್ತಾರೆ ಎನ್ನುವುದು ಬೇಲೂರ ಗ್ರಾಮದ ಜನರು ದೂರುತ್ತಾರೆ.

ಉಗ್ರ ಹೋರಾಟದ ಎಚ್ಚರಿಕೆ: ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು ಮತ್ತು ಎಸ್‌ಡಿಎಂಸಿ ಸದಸ್ಯರು ಕ್ರಮ ಜರುಗಿಸಬೇಕು. ಇಲ್ಲವೇ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿ ಅಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಅಕ್ರಮ ಮದ್ಯದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಧ್ಯಕ್ಷ ಆಕಾಶ ಖಂಡಾಳೆ ಒತ್ತಾಯಿಸಿದರು.

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಶಾಲೆ ದೇವಸ್ಥಾನ ಆಸ್ಪತ್ರೆ ಸುತ್ತ ಮದ್ಯ ಅಕ್ರಮ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು
ಸಾಧಿಕ್ ಬಾಷಾ ಅಬಕಾರಿ ಉಪ ನಿರೀಕ್ಷಕ ಹುಲಸೂರ ಬಸವಕಲ್ಯಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.