ಔರಾದ್: ರೈತರಾಗಿರುವ ರಾಜಕುಮಾರ ನಾಯ್ಕ ಅವರು ಜನರಿಗೆ ಯೋಗ ಕಲಿಸುತ್ತಿದ್ದಾರೆ.
ತಾಲ್ಲೂಕಿನ ಕರಂಜಿ (ಕೆ) ಗ್ರಾಮದ ರಾಜಕುಮಾರ ಅವರು ಬಾಲ್ಯದಿಂದಲೂ ಯೋಗದ ಬಗ್ಗೆ ತುಂಬಾ ಆಸಕ್ತಿ ಇಟ್ಟುಕೊಂಡವರು. ಹರಿದ್ವಾರಕ್ಕೆ ಹೋಗಿ ಮೂರು ತಿಂಗಳು ಯೋಗ ಹಾಗೂ ಅಧಾತ್ಮಕ ಜ್ಞಾನ ಪಡೆದುಕೊಂಡು ಬಂದ ನಂತರ ಜನರಿಗೆ ಯೋಗ ಕಲಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.
‘ನಮ್ಮದು ರೋಗ ಮುಕ್ತ ಸಮಾಜ ಆಗಬೇಕು. ಕಳೆದ 10 ವರ್ಷಗಳಿಂದ ಯೋಗ ತರಬೇತಿ ಕೊಡುತ್ತಿದ್ದೇನೆ. ಇಲ್ಲಿಯ ತನಕ 200 ತಾಂಡಾಗಳಲ್ಲಿ ಯೋಗ ಶಿಬಿರ ನಡೆಸಿದ್ದೇನೆ. 100ಕ್ಕೂ ಹೆಚ್ಚು ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಸಿದ್ದೇನೆ. ಬಾಗಲಕೋಟೆ ಜಿಲ್ಲೆಯ ನೈಸರ್ಗಿಕ ಚಿಕಿತ್ಸಾ ಕೇಂದ್ರದಲ್ಲಿ ಆರು ತಿಂಗಳು ಯೋಗ ಶಿಕ್ಷಕನಾಗಿ ಕೆಲಸ ಮಾಡಿದ ಅನುಭವ ನನಗಿದೆ’ ಎಂದು ಯೋಗ ಶಿಕ್ಷಕ ರಾಜಕುಮಾರ ಹೇಳುತ್ತಾರೆ.
‘ಯೋಗದ ಮೂಲಕ ಅನೇಕ ರೋಗಳಿಗೆ ಚಿಕಿತ್ಸೆ ಇದೆ ಎನ್ನುವುದು ನನ್ನ ಸ್ವಂತಕ್ಕೆ ಬಂದ ಅನುಭವ. ಈ ಯೋಗ ಯಾವುದೇ ಒಂದು ಜಾತಿ ಸಮುದಾಯಕ್ಕೆ ಸೇರಿದ್ದಲ್ಲ. ರೋಗ ಮುಕ್ತ ಸಮಾಜ ಬಯಸುವವರು ಎಲ್ಲರೂ ಇದನ್ನು ಒಪ್ಪಿಕೊಂಡು ಪಾಲಿಸಬೇಕು’ ಎಂದರು.
’ಹತ್ತು ವರ್ಷಗಳಿಂದ ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೇ ಯೋಗ ತರಬೇತಿ ನೀಡುತ್ತಿದ್ದಾರೆ. ಇಂತವರು ಸಮಾಜದಲ್ಲಿ ಅಪರೂಪ’ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಅಭಿಪ್ರಾಯಪಟ್ಟರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.