ಬೀದರ್: ‘ಮೊಬೈಲ್ ಹಾವಳಿಯಿಂದ ಜಾನಪದ ಕಲೆಗಳು ಮರೆಯಾಗುತ್ತಿದ್ದು, ಅದಕ್ಕೆ ಮರುಜೀವ ತುಂಬುವ ಕೆಲಸ ಮಾಡುವೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಶಿವಪ್ರಸಾದ ಗೊಲ್ಲಹಳ್ಳಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಾನಪದದ ಶ್ರೇಷ್ಠ ಪದಗಳ ಮುಂದೆ ಸಿನೆಮಾ ರಂಗ ಏನೂ ಇಲ್ಲ. ಆದರೆ, ಜನ ಜಾನಪದ ಮರೆಯುತ್ತಿದ್ದಾರೆ ಎಂದರು.
ಜಾನಪದ ನೆಲದ ಸಂಸ್ಕೃತಿ. ಆ ಪರಂಪರೆಯನ್ನು ಉಳಿಸೋಣ. ಶ್ರಮ ಮತ್ತು ಜನಪದ ಒಟ್ಟಿಗೆ ಬೆಳೆದಿದೆ. ಇಡೀ ರಾಜ್ಯದಲ್ಲಿರುವ ಜಾನಪದ ಕಲಾ ಪ್ರಕಾರಗಳಿಗೆ ಶಕ್ತಿ ಕೊಡುವ ಕೆಲಸ ಮಾಡುವೆ. ಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಉದ್ಘಾಟಿಸಿ, ನೆಲದ ಸಂಸ್ಕೃತಿ ಜನಪದ ಸಂಸ್ಕೃತಿ. ಜಾನಪದ ಕಲಾವಿದರು ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಎಂದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಜಿಲ್ಲಾ ಸಂಚಾಲಕ ರಮೇಶ ಡಾಕುಳಗಿ ಅವರು ಶಿವಪ್ರಸಾದ ಗೋಲ್ಲಹಳ್ಳಿ ಅವರು ನಡೆದು ಬಂದ ದಾರಿ ಪುಸ್ತಕ ಬಿಡುಗಡೆಗೊಳಿಸಿದರು.
ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಕಲಾವಿದರ ಮಾಸಾಶನ ವಯಸ್ಸು 58 ರಿಂದ 50ಕ್ಕೆ ಇಳಿಸಬೇಕು. ಕಲಾವಿದರು ಯಾವುದೇ ಘಟನೆಯಲ್ಲಿ ಮೃತರಾದರೆ ಅವರ ಕುಟುಂಬಕ್ಕೆ ₹5 ರಿಂದ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂದೆ, ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ, ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ರಾಜಕುಮಾರ ಬನ್ನೇರ್, ಶಂಭುಲಿಂಗ ವಾಲದೊಡ್ಡಿ, ಅನಿಲ್ ಬಿರಾದಾರ, ಕಲಾವಿದೆ ಸಂಗಮ್ಮ, ಫರ್ನಾಂಡಿಸ್ ಹಿಪ್ಪಳಗಾಂವ, ಸುನೀಲ್ ಕಡ್ಡೆ, ದೇವಿದಾಸ ಚಿಮಕೋಡ್, ಏಸುದಾಸ್ ಅಲಿಯಂಬರ್, ಬಕ್ಕಪ್ಪ ದಂಡಿನ್, ಸಂಗಮೇಶ ಬೆಲ್ದಾಳೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.