ಬೀದರ್: ‘ಕೋರ್ಟ್ ಆದೇಶದ ಪ್ರತಿ ನನ್ನ ಕೈಸೇರುವವರೆಗೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷನಾಗಿ ನಾನೇ ಮುಂದುವರಿಯುವೆ’ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಾಲಿ ಜಿಲ್ಲಾ ಅಧ್ಯಕ್ಷ ಡಿ.ಕೆ.ಗಣಪತಿ ಹೇಳಿದರು.
ನಗರದಲ್ಲಿ ಶನಿವಾರ ಪೊಲೀಸ್ ಬಂದೋಬಸ್ತ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕಕುಮಾರ ಕರಂಜೆ ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಕೋರ್ಟ್ ಆದೇಶದಂತೆ ನಾನೇ ಅಧ್ಯಕ್ಷ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಕೋರ್ಟ್ ಆದೇಶದ ಪ್ರತಿ ನನಗೆ ಬಂದಿಲ್ಲ. ಅಲ್ಲದೇ ರಾಜ್ಯ ಘಟಕದಿಂದಲೂ ಯಾವುದೇ ಆದೇಶ ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಮಾ. 4ರಂದು ರಾಜ್ಯ ಘಟಕದ ಅಧ್ಯಕ್ಷರ ಸಮ್ಮುಖದಲ್ಲಿ ಹಾಲಿ ಅಧ್ಯಕ್ಷ ಡಿ.ಕೆ.ಗಣಪತಿ ಅವರೇ ಮುಂದುವರಿಯಲಿ. ನನ್ನದು ಯಾವುದೇ ರೀತಿಯ ತಕರಾರು ಇಲ್ಲ ಹಾಗೂ ಉಚ್ಚ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಹಿಂಪಡೆಯುತ್ತೇನೆ ಎಂದು ಕರಂಜೆ ಅವರೇ ಸ್ವಯಂ ಪ್ರೇರಣೆಯಿಂದ ಒಪ್ಪಿಕೊಂಡಿದ್ದರು. ಆದರೆ ಮತ್ತೇ ತಗಾದೆ ತೆಗೆದಿದ್ದಾರೆ. ಅಧಿಕಾರದ ರುಚಿ ಅನುಭವಿಸಿದ ಅವರಿಗೆ ಈಗ ನನ್ನ ಏಳಿಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದಲೇ ಹೀಗೆ ಮಾಡುತ್ತಿದ್ದಾರೆ. ಕೋರ್ಟ್ ಆದೇಶದಂತೆ ಏ.15 ರವರೆಗೆ ಸಂಘದಿಂದ ಯಾವುದೇ ರೀತಿಯ ಅಧಿಕೃತ ಚಟುವಟಿಕೆಗಳನ್ನು ಮಾಡುವುದಿಲ್ಲ’ ಎಂದು ಹೇಳಿದರು.
ರಾಜ್ಯ ಘಟಕದ ಬಸವರಾಜ ಕಾಮಶೆಟ್ಟಿ ಮಾತನಾಡಿ, ‘ನಿಕಟಪೂರ್ವ ಅಧ್ಯಕ್ಷ ಅಶೋಕಕುಮಾರ ಕರಂಜೆ ಪಾರದರ್ಶಕ ಚುನಾವಣೆ ಮಾಡದೇ ವಾಮ ಮಾರ್ಗದಿಂದ ಅಧ್ಯಕ್ಷರಾಗಿದ್ದಾರೆ. ಅವರು ವಚನ ಭ್ರಷ್ಟರಾಗಿದ್ದಾರೆ. ಸಂಘದ ಕಾರ್ಡ್ (ಗುರುತಿನ ಚೀಟಿ) ವಿತರಣೆಯಲ್ಲಿಯೂ ಹಣ ಲೂಟಿ ಮಾಡಿದ್ದಾರೆ. ಅಲ್ಲದೇ ಅವರೊಬ್ಬ ಸುಳ್ಳಿನ ಸರದಾರರಾಗಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.