ADVERTISEMENT

‘ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆ ಕಡ್ಡಾಯ’

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 4:51 IST
Last Updated 27 ಫೆಬ್ರುವರಿ 2024, 4:51 IST
ಭಾಲ್ಕಿಯ ಪುರಸಭೆಯಲ್ಲಿ ನಡೆದ ಕನ್ನಡ ನಾಮಫಲಕ ಅಳವಡಿಕೆಯ ತುರ್ತು ಸಭೆಯಲ್ಲಿ ತಹಶೀಲ್ದಾರ್ ಶ್ರೀಯಾಂಕಾ ಧನಾಶ್ರೀ ಮಾತನಾಡಿದರು
ಭಾಲ್ಕಿಯ ಪುರಸಭೆಯಲ್ಲಿ ನಡೆದ ಕನ್ನಡ ನಾಮಫಲಕ ಅಳವಡಿಕೆಯ ತುರ್ತು ಸಭೆಯಲ್ಲಿ ತಹಶೀಲ್ದಾರ್ ಶ್ರೀಯಾಂಕಾ ಧನಾಶ್ರೀ ಮಾತನಾಡಿದರು   

ಭಾಲ್ಕಿ: ಪಟ್ಟಣದ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿಯ ಅಂಗಡಿ, ಮುಗ್ಗಟ್ಟು ಮತ್ತು ಸರ್ಕಾರಿ ಕಚೇರಿಗಳಲ್ಲಿಯ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಬಳಸಲು ಫೆ.29 ಕಡೆ ದಿನವಾಗಿದ್ದು, ಎಲ್ಲರೂ ತಕ್ಷಣವೇ ತಮ್ಮ ನಾಮ ಫಲಕಗಳಿಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ತಹಶೀಲ್ದಾರ್ ಶ್ರೀಯಾಂಕಾ ಧನಾಶ್ರೀ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಸೋಮವಾರ ಕರೆದ ವಿವಿಧ ಇಲಾಖೆ ಅಧಿಕಾರಿ, ಅಂಗಡಿ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಎಲ್ಲ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ತಮ್ಮ ಅಂಗಡಿಗಳಲ್ಲಿ ಕನ್ನಡ ನಾಮಫಲಕಕ್ಕೆ ಆದ್ಯತೆ ನೀಡಬೇಕು. ಯಾವುದೇ ರೀತಿಯ ಕಾನೂನು ಕ್ರಮಕ್ಕೆ, ಘರ್ಷಣೆಗೆ ಅವಕಾಶ ಕೊಡದೆ ತಕ್ಷಣವೇ ನಾಮಫಲಕ ಬದಲಾಯಿಸಿಕೊಳ್ಳಿ ಎಂದು ಸಲಹೆ ನೀಡಿದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ ಮಾತನಾಡಿ, ಈಗಾಗಲೇ ಪಟ್ಟಣದ ಎಲ್ಲ ಓಣಿಗಳಲ್ಲಿಯೂ ಇರುವ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಇದಕ್ಕೂ ಮೀರಿ ಅನ್ಯ ಭಾಷೆಗೆ ಆದ್ಯತೆ ನೀಡಿದರೆ ಸರ್ಕಾರ ಆದೇಶದ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ ಮಾತನಾಡಿ, ಬಹುದಿನದ ಹೋರಾಟಗಳ ಫಲವಾಗಿ ಇಂದು ಸದನದಲ್ಲಿ ಕನ್ನಡಭಾಷೆಗೆ ಆದ್ಯತೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ಆದೇಶಕ್ಕೆ ಸಾರ್ವಜನಿಕರು ಗೌರವಿಸಬೇಕು. ಗೌರವಿಸದಿದ್ದಲ್ಲಿ ಫೆ.29 ರ ನಂತರ ಬೆಂಗಳೂರು ಮಾದರಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಮಾತನಾಡಿ, ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಕನ್ನಡ ಭಾಷೆಯ ನಾಮಫಲಕಕ್ಕೆ ಪ್ರಥಮಾದ್ಯತೆ ನೀಡಲು ಆದೇಶಿಸಲಾಗಿದೆ. ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಂಡು ಕಾನೂನು ರೀತಿ ದಂಡ ವಿಧಿಸಲಾಗುವುದು ಎಂದು ಹೇಳಿದರು. ಪಿಎಸ್‍ಐ ಯಶೋಧಾ ಕಟಕಿ, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಪುರಸಭೆ ಸದಸ್ಯರಾದ ಪಾಂಡುರಂಗ ಕನಸೆ, ಓಂಕಾರ ಮೋರೆ, ಎಂಪಿಎಂ ಅಧಿಕಾರಿಗಳಾದ ಬೀರಲಿಂಗ ಹಿರಿಯರಕರ್, ಸುಭಾಷ, ಜಯರಾಜ ದಾಬಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.